ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನ ಸಭಾ ಚುನಾವಣಾ ಕಣ ಕಾವೇರುತ್ತಿದ್ದು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಯುಡಿಎಫ್ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕಣ್ಣೂರಿನಲ್ಲಿ ಯುಡಿಎಫ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ರಾಹುಲ್, ಬಿಜೆಪಿ ಹಾಗೂ ಎಲ್ಡಿಎಫ್ ಅಪವಿತ್ರ ಮೈತ್ರಿ ಆಗಿದ್ದು, ಪ್ರಧಾನಿ ಮೋದಿ ಅವರಿಗೆ ಖುದ್ದು ಎಡರಂಗವೇ ಅಧಿಕಾರಕ್ಕೆ ಬರಬೇಕೆಂದು ಅಸೆ ಇದೆ ಎಂದು ಟೀಕಿಸಿದರು.
ಎಡಪಂಥೀಯ ಸಿದ್ಧಾಂತ ಹಾಗೂ ಬಲಪಂಥೀಯ ಸಿದ್ಧಾಂತಗಳು ವಿಭಿನ್ನವಾದರೂ ಇಲ್ಲಿ ಇಬ್ಬರು ಒಂದಾಗಿದ್ದು ಅಚ್ಚರಿಯ ವಿಷಯವಾಗಿದೆ. ಇಂದು ಎಲ್ಡಿಎಫ್ ಬಿಜೆಪಿಯ ಪಾಲುದಾರ ಪಕ್ಷವಾಗಿ ವರ್ತಿಸುತ್ತಿದೆ. ಅದಕ್ಕಾಗಿ ಅನೇಕರು ಎಡರಂಗವನ್ನು ತೊರೆದು ಯುಡಿಎಫ್ ಯತ್ತ ಮುಖಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶಬರಿಮಲೆ ಚಿನ್ನ ನಾಪತ್ತೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ, ಕೇರಳಕ್ಕೆ ಬಂದರೂ ಚಿನ್ನದ ವಿಚಾರದಲ್ಲಿ ಮಾತನಾಡುತ್ತಿಲ್ಲ. ಹಗರಣದಲ್ಲಿ ಸಿಪಿಐ(ಎಂ) ನಾಯಕರ ಹೆಸರಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಕೇರಳ ಮುಖ್ಯಮಂತ್ರಿಗಳನ್ನು ಪ್ರಧಾನಿ ಮೋದಿ ನಿಯಂತ್ರಿಸುತ್ತಿದ್ದು, ಅದಕ್ಕಾಗಿ ಮೋದಿಯವರನ್ನು ಕೇರಳ ಸಿಎಂ ಎಂದಿಗೂ ಟೀಕಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.



