ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ನಾಯಕರು ಹಾಗೂ ಕರ್ನಾಟಕದಿಂದ ಹೊಸದಾಗಿ ಚುನಾಯಿತರಾದ ಕೆಲವು ಶಾಸಕರು ಮಂಗಳವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೊಂದಿಗೆ ಖರ್ಗೆ ಸಭೆ ನಡೆಸುವ ನಿರೀಕ್ಷೆಯಿದೆ.
ಶಿವಕುಮಾರ್ ಇಂದು ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದರೆ, ಒಂದು ದಿನದ ಹಿಂದೆ ದೆಹಲಿಗೆ ಬಂದ ಸಿದ್ದರಾಮಯ್ಯ ನಿನ್ನೆ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದರು.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳುವ ಮುನ್ನ “ನಾವು ಈ ಪಕ್ಷವನ್ನು ನಾವು ನಿರ್ಮಿಸಿದ್ದೇವೆ. ನಾನು ಅದರ ಭಾಗವಾಗಿದ್ದೇನೆ … ತಾಯಿ ತನ್ನ ಮಗುವಿಗೆ ಎಲ್ಲವನ್ನೂ ನೀಡುತ್ತಾಳೆ” ಎಂದು ಹೇಳಿದರು. ಪಕ್ಷದ ನಿರ್ಧಾರ ಏನೇ ಬಂದರೂ ಬೆನ್ನಿಗೆ ಚೂರಿ ಹಾಕುವ, ಬ್ಲ್ಯಾಕ್ ಮೇಲ್ ಮಾಡುವ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡಿದೆ.
ಕರ್ನಾಟಕದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನೇಮಿಸಿರುವ ಮೂವರು ಕೇಂದ್ರ ವೀಕ್ಷಕರು ಸೋಮವಾರ ದೆಹಲಿಗೆ ಆಗಮಿಸಿದ್ದು, ಕರ್ನಾಟಕದ ಮುಖ್ಯಮಂತ್ರಿ ನೇಮಕದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದಾರೆ.