ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ – ನರೇಂದ್ರ ಮೋದಿ ಜೋಡಿ ಪ್ರಚಂಡ ಯಶಸ್ಸು ಕಂಡಿದ್ದರೆ, ವಿರೋಧ ಪಕ್ಷದ ತೇಜಸ್ವಿ ಯಾದವ್ – ರಾಹುಲ್ ಗಾಂಧಿ ಮೈತ್ರಿಕೂಟವು ನಿರೀಕ್ಷಿತ ಮಟ್ಟದಲ್ಲಿ ಮಿಂಚಲು ಸಾಧ್ಯವಾಗದೆ ಸಂಪೂರ್ಣವಾಗಿ ನೆಲಕಚ್ಚಿದೆ.
ವಿಶೇಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚರಿಷ್ಮಾ ಬಿಹಾರದಲ್ಲಿ ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ರಾಹುಲ್ ಗಾಂಧಿಯವರು ಪ್ರಚಾರದಲ್ಲಿ ಎತ್ತಿದ ಪ್ರಮುಖ ವಿಷಯಗಳಾದ ‘ವೋಟ್ ಚೋರಿ’ ಆರೋಪ, ನಿರುದ್ಯೋಗದ ಸಮಸ್ಯೆಗಳು, ಮತ್ತು ಕಾಂಗ್ರೆಸ್ನ ‘ಗ್ಯಾರಂಟಿ’ ಭರವಸೆಗಳು ಮತದಾರರನ್ನು ತಮ್ಮತ್ತ ಸೆಳೆಯಲು ವಿಫಲವಾಗಿವೆ. ರಾಹುಲ್ ಗಾಂಧಿಯವರ ಅನೇಕ ರ್ಯಾಲಿಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರೂ, ಆ ಜನಬೆಂಬಲ ಮತಗಳಾಗಿ ಪರಿವರ್ತನೆಯಾಗದಿರುವುದು ವಿಪರ್ಯಾಸ.
‘ಮತ ಅಧಿಕಾರ ಯಾತ್ರೆ’ಗೆ ಶೂನ್ಯ ಸಂಪಾದನೆ
ಕಾಂಗ್ರೆಸ್ಗೆ ಬಿಹಾರ ಫಲಿತಾಂಶವು ಭಾರೀ ಮುಖಭಂಗ ತಂದಿದೆ. ಕಳೆದ ಆಗಸ್ಟ್ನಲ್ಲಿ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿದ್ದ ‘ಮತ ಅಧಿಕಾರ ಯಾತ್ರೆ’ ನಡೆದ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಸಸಾರಾಂನಿಂದ ಪಾಟ್ನಾವರೆಗೆ ಸುಮಾರು 25 ಜಿಲ್ಲೆಗಳು ಮತ್ತು 110 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, 1,300 ಕಿಲೋಮೀಟರ್ಗಳಷ್ಟು ಉದ್ದ ಸಾಗಿದ ಈ ಯಾತ್ರೆ ಯಾವುದೇ ಮ್ಯಾಜಿಕ್ ಮಾಡಲಿಲ್ಲ. ಯಾತ್ರೆ ಸಾಗಿದ ಮಾರ್ಗದಲ್ಲಿ ಕಾಂಗ್ರೆಸ್ಗೆ ಶೂನ್ಯ ಸಂಪಾದನೆ ಆಗಿರುವುದು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ದೊಡ್ಡ ಹಿನ್ನಡೆಯಾಗಿದೆ.

