ಕರ್ನಾಟಕ ಸರ್ಕಾರದ ಆಟೊ ರಿಕ್ಷಾ ಸಬ್ಸಿಡಿಯಲ್ಲೂ ತುಷ್ಟೀಕರಣ?- ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌

ರಾಜ್ಯ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ರಾಜಕೀಯ ಬಗ್ಗೆ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್‌ ಅವರು ಟೀಕಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರವು ಆಟೊ ರಿಕ್ಷಾ ಸಬ್ಸಿಡಿ ಯೋಜನೆಯಲ್ಲೂ ತುಷ್ಟೀಕರಣ ನಡೆಸುತ್ತಿರುವುದಾಗಿ ಹೇಳಿರುವ ಅವರು, ಇದೊಂದು ಸರ್ಕಾರಿ ಪ್ರಾಯೋಜಿತ ಮತಾಂತರ ಕಾರ್ಯ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿರುವ ಅವರು ಜಾಹೀರಾತಿನ ಪ್ರಕಟಣೆಯನ್ನು ಲಗತ್ತಿಸಿ ಜೊತೆಗೆ ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ಕಾಂಗ್ರೆಸ್ ಸರ್ಕಾರವು ಕೆಲವು ಸಮುದಾಯಗಳಿಗೆ ಹೇಗೆ ಲಂಚ ನೀಡಿ, ತುಷ್ಟೀಕರಣದ ರಾಜಕೀಯವನ್ನು ನಡೆಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಜನರು ಸಬ್ಸಿಡಿ ಯೋಜನೆ ಅಡಿಯಲ್ಲಿ 6 ಲಕ್ಷ ಮೌಲ್ಯದ ವಾಹನವನ್ನು 3 ಲಕ್ಷಕ್ಕೆ ಖರೀದಿಸಬಹುದು. ಕೂಡಲೇ 5 ಲಕ್ಷಕ್ಕೆ ಮಾರಾಟ ಮಾಡಿ 2 ಲಕ್ಷ ಲಾಭ ಪಡೆಯಬಹುದು. ಈ ಮೂಲಕ ಕಾಂಗ್ರೆಸ್‌ ತುಷ್ಟೀಕರಣದ ರಾಜಕೀಯ ನಡೆಸುತ್ತಿದೆ. ಅಲ್ಲದೇ ಈ ಸೌಲಭ್ಯವು ಹಿಂದೂಯೇತರ ಸಮುದಾಯಗಳಿಗೆ ಮಾತ್ರ ಲಭ್ಯವಿದ್ದು, ಬಡ ಹಿಂದೂಗಳಿಗೆ ಈ ಸೌಲಭ್ಯವಿಲ್ಲ ಎಂಬುದನ್ನು ಟೀಕಿಸಿದ್ದಾರೆ.

ಸಮಸ್ತ ಕನ್ನಡಿಗರಿಗೆ ಮೀಸಲಾದ ಸಾರ್ವಜನಿಕ ಸಂಪನ್ಮೂಲಗಳನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ನಾಚಿಕೆಯಿಲ್ಲದೇ, ಲಂಚದ ರೂಪದಂತೆ ನೀಡಿ ತಾರತಮ್ಯ ಮಾಡುವ ಈ ಕಾಂಗ್ರೆಸ್ ಪಕ್ಷ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತಿದೆ. ಹಾಗೂ ಇದೇ ಪಕ್ಷ ವಿದೇಶಗಳಲ್ಲಿ ಭಾರತದ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತದೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯ ಸರ್ಕಾರಿ ಪ್ರಾಯೋಜಿತ ಮತಾಂತರ ಕಾರ್ಯಕ್ರಮವಿದಾಗಿದೆ ಎಂದು ದೂರಿದರಲ್ಲದೆ, ಇದು ಯು.ಪಿ.ಎ/ಐ.ಎನ್.ಡಿ.ಐ.ಎ ಮೈತ್ರಿಕೂಟದ ಕುಟುಂಬ ರಾಜಕಾರಣದ ಹಾಗೂ ಭ್ರಷ್ಟ ರಾಜಕಾರಣದ ಹೂರಣ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!