ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಾಲಯದ ಪಶ್ಚಿಮ ಭಾಗದಲ್ಲಿರುವ ಬಿಜೆಪಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಪರಿಷತ್ ಸದಸ್ಯ ರಾಜೇಶ್ ಬನ್ನೂರು ಅವರ ಮನೆ ಧ್ವಂಸಗೊಂಡ ನಂತರ ಶ್ರೀ ಮಹಾಲಿಂಗೇಶ್ವರ ದೇವಾಲಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಸುಕು ಧಾರಿಗಳು ಓಮ್ನಿ ಕಾರಿನಲ್ಲಿ ಬಂದು ಮನೆ ನೆಲಸಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಮನೆಯಲ್ಲಿದ್ದ ನಾಯಿ ಮರಿ ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದು, ಅಲ್ಲದೆ 32 ಗ್ರಾಂ ಚಿನ್ನ, ದಾಖಲೆ ಪತ್ರ, ಹಣಗಳನ್ನೆಲ್ಲ ಮುಸುಧಾರಿಗಳು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಬೆನ್ನಲ್ಲೇ ಈ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಪುತ್ತೂರು ನಗರ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೆ. ದರೋಡೆ ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು.
ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಆಗಮಿಸಿ ಯಾವುದೇ ಸೂಚನೆ ನೀಡದೇ ರಾಜೇಶ್ ಬನ್ನೂರು ಅವರ ಮನೆ ಧ್ವಂಸಗೊಳಿಸಿದವರ ಮೇಲೆ ಕೇಸ್ ಹಾಕುವಂತೆ ಒತ್ತಾಯಿಸಿದರು. ಕೊನೇ ಕ್ಷಣದಲ್ಲಿ ಪುತ್ತೂರು ನಗರಠಾಣಾ ಪೊಲೀಸರು ಪುತ್ತೂರು ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಟ್ರಸ್ಟಿ ವಿನಯ ಸುವರ್ಣ ಮತ್ತು ಇತರರ ಮೇಲೆ ಕೇಸ್ ದಾಖಲಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಸ್ಥಳಕ್ಕೆ ಭೇಟಿ ನೀಡಿ ಬನ್ನೂರು ಅವರ ಮನೆ ಧ್ವಂಸದಲ್ಲಿ ದೇವಾಲಯ ಆಡಳಿತ ಮಂಡಳಿಯ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.