ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ರಾಮನವಮಿ ಅಯೋಧ್ಯೆಯಲ್ಲಿ (Ayodhya) ವಿಶೇಷವಾಗಿರಲಿದೆ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಹೀಗಾಗಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಆದ್ದರಿಂದ ಈ ಬಾರಿಯರಾಮನವಮಿಯನ್ನು ಪ್ರತೀ ಊರಲ್ಲಿ ವಿಶೇಷವಾಗಿ ಆಚರಿಸುವಂತೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ತರಾಗಿರುವ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ .
ಈ ಕುರಿತಾಗಿ ಎಪ್ರಿಲ್ 5 ರಂದು ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್ ನ ಸಭೆಯಲ್ಲೂ ಎಲ್ಲ ಸದಸ್ಯರು ವಿವರವಾಗಿ ಚರ್ಚಿಸಿದ್ದಾರೆ .
ಚುನಾವಣಾ ನೀತಿ ಸಂಹಿತೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪ್ರತೀ ಊರಲ್ಲಿರುವ ದೇವಸ್ಥಾನ, ಭಜನಾ ಮಂದಿರ ಸಮುದಾಯ ಭವನಗಳಲ್ಲಿ ಭಜನೆ , ರಾಮತಾರಕ ಮಂತ್ರ ಜಪ ಯಜ್ಞ ಸಾಲುದೀಪ ಬೆಳಗುವುದು,ಮಕ್ಕಳಿಗಾಗಿ ರಾಮವೇಷ ಸ್ಪರ್ಧೆ , ರಾಮಾಯಣ ಆಧಾರಿತ ರಸಪ್ರಶ್ನೆ , ಭಕ್ತರಿಗೆ ಪಾನಕ ಕೋಸುಂಬರಿ ಮೊದಲಾದವುಗಳ ವಿತರಣೆ ಇತ್ಯಾದಿಗಳನ್ನು ಸಾಮೂಹಿಕವಾಗಿ ಆಚರಿಸಬೇಕು . ಆದ್ರೆ ಯಾವುದೇ ಬಹಿರಂಗ ವೇದಿಕೆಯ ಕಾರ್ಯಕ್ರಮಗಳು ಬೇಕಿಲ್ಲ ಎಂದು ತಿಳಿಸಿದ್ದಾರೆ.
ಅದೇ ರೀತಿ ಸಮಾಜದಲ್ಲಿರುವ ಅಶಕ್ತರಿಗಾಗಿ ಸೇವಾ ಕಾರ್ಯಗಳನ್ನೂ ಸಂಯೋಜಿಸಬೇಕು . ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ, ಬಡ ರೋಗಿಗಳ ಚಿಕಿತ್ಸಾ ವೆಚ್ಚ , ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ ,ಊರು ಹಳ್ಳಿಗಳಲ್ಲಿ ಶ್ರಮದಾನಗಳ ಮೂಲಕ ಸ್ವಚ್ಛತಾ ಕಾರ್ಯ , ಕೆರೆಗಳ ಶುದ್ಧೀಕರಣ , ಸುಡು ಬೇಸಿಗೆಯ ದಿನಗಳಾದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು ,ಗೋಶಾಲೆಗಳಿಗೆ ನೆರವು, ಅನಾಥರಿಗೆ ಊಟೋಪಹಾರ ವಿತರಣೆ ಹೀಗೆ ಇಷ್ಟು ಮಾತ್ರವಲ್ಲದೇ ಸಮಾಜೋಪಯೋಗಿಯಾದ ಇನ್ನೂ ಹಲವು ಸೇವಾ ಕಾರ್ಯಗಳಿವೆ . ಊರ ಮಂದಿ ಸೇರಿಕೊಂಡು ಇಂಥಹ ಸೇವಾ ಕಾರ್ಯಗಳನ್ನು ನಡೆಸುವುದೂ ಶ್ರೀರಾಮನ ದೊಡ್ಡ ಸೇವೆಯಾಗುತ್ತದೆ ಎಂದು ಶ್ರೀಗಳು ಕರೆ ನೀಡಿದ್ದಾರೆ .