June 22, 2026
Monday, June 22, 2026
spot_img

ರಾಮಮಂದಿರ ದೇಣಿಗೆ ವಿವಾದ: ಸಿಎಂ ಯೋಗಿ ಕೈಸೇರಿದ ಎಸ್‌ಐಟಿ ತನಿಖಾ ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ. ಆರು ದಿನಗಳ ತನಿಖೆಯ ಬಳಿಕ ಈ ವರದಿ ಸಿದ್ಧಗೊಂಡಿದೆ.

ಪ್ರಾಥಮಿಕ ತನಿಖೆಯಲ್ಲಿ ಹಲವು ಹೆಸರುಗಳು

ಎಸ್‌ಐಟಿ ನಡೆಸಿದ ಪರಿಶೀಲನೆಯಲ್ಲಿ ಕೇವಲ ಸಿಬ್ಬಂದಿ ಮಾತ್ರವಲ್ಲದೆ ಟ್ರಸ್ಟ್‌ಗೆ ಸಂಬಂಧಿಸಿದ ಹಲವು ವ್ಯಕ್ತಿಗಳ ಹೆಸರುಗಳು ಬೆಳಕಿಗೆ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪ್ರಮುಖರನ್ನು ದೀರ್ಘಕಾಲ ವಿಚಾರಣೆ ನಡೆಸಲಾಗಿದೆ. ಎಸ್‌ಐಟಿ ತಂಡವು ಸುಮಾರು 60 ಗಂಟೆಗಳ ಕಾಲ ಪರಿಶೀಲನೆ ನಡೆಸಿ, 150ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಿದೆ. ದೇಣಿಗೆ ಸಂಗ್ರಹ, ಎಣಿಕೆ ಹಾಗೂ ಸಾಗಣೆ ವ್ಯವಸ್ಥೆಯ ವಿವಿಧ ಹಂತಗಳನ್ನು ಪರಿಶೀಲಿಸಲಾಗಿದೆ.

ಎಫ್‌ಐಆರ್‌ಗೆ ಸಿದ್ಧತೆ

ತನಿಖೆಯ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲು ಎಸ್‌ಐಟಿ ಮುಂದಾಗಿದೆ. ಅಂತಿಮ ನಿರ್ಧಾರ ಸರ್ಕಾರದ ಪರಿಶೀಲನೆಯ ಬಳಿಕ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ:

ವ್ಯವಸ್ಥೆಯಲ್ಲೇ ಲೋಪ ಪತ್ತೆ

ಪ್ರಾಥಮಿಕ ವರದಿಯಲ್ಲಿ ದೇಣಿಗೆ ಪೆಟ್ಟಿಗೆಯಿಂದ ನಗದು ಹಾಗೂ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವ ಮತ್ತು ಬ್ಯಾಂಕ್‌ಗೆ ಸಾಗಿಸುವ ಪ್ರಕ್ರಿಯೆಯಲ್ಲಿ ಕೆಲವು ಲೋಪಗಳಿರುವ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಹಿರಿಯ ಅಧಿಕಾರಿಗಳ ಹೆಸರು ಇಲ್ಲ

ಈ ಹಂತದ ವರದಿಯಲ್ಲಿ ಟ್ರಸ್ಟ್‌ನ ಹಿರಿಯ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಕೆಲವು ಸಿಬ್ಬಂದಿ ಹಾಗೂ ನಗದು ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವ್ಯಕ್ತಿಗಳ ಪಾತ್ರದ ಬಗ್ಗೆ ಪರಿಶೀಲನೆ ಮುಂದುವರಿದಿದೆ.

ಅಯೋಧ್ಯೆ ತೊರೆಯದಂತೆ ಸೂಚನೆ

ತನಿಖೆ ಪೂರ್ಣಗೊಳ್ಳುವವರೆಗೆ ದೇವಾಲಯಕ್ಕೆ ಸಂಬಂಧಿಸಿದ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಯೋಧ್ಯೆ ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !