ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಶ್ರೀರಾಮ ಮಂದಿರದ ವಿಚಾರವಾಗಿ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಮಾತನಾಡಿದ್ದಾರೆ.
ಅಯೋಧ್ಯೆಯ ನೂತನ ಶ್ರೀರಾಮ ಮಂದಿರದಲ್ಲಿ ಗುರುವಾರ ರಾಮಲಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಮೂರ್ತಿಯ ಕಣ್ಣಿಗೆ ಹಸಿರು, ಅರಿಶಿನ ಬಟ್ಟೆಯನ್ನು ಕಟ್ಟಲಾಗಿದೆ. ಶುಕ್ರವಾರ ಹೊಸ ರಾಮಲಲಾ ಮೂರ್ತಿಯ ಚಿತ್ರಗಳು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ದಿಗ್ವಿಜಯ್ ಸಿಂಗ್ ಹೊಸ ರಾಮಲಾ ಮೂರ್ತಿಯನ್ನು ಕೆತ್ತಿರುವ ರೀತಿಯ ಬಗ್ಗೆ ತಗಾದೆ ತೆಗೆದಿದ್ದಾರೆ.
ಶ್ರೀರಾಮಮಂದಿರದ ಒಳಗೆ ಪ್ರತಿಷ್ಠಾಪನೆ ಮಾಡಲಾಗಿರುವ ಮೂರ್ತಿಯಲ್ಲಿ ಬಾಲರೂಪದಲ್ಲಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ರಾಮಲಲಾ ಮೂರ್ತಿ ಎಂದರೆ ಬಾಲಕ ರೂಪದಲ್ಲಿ, ತಾಯಿ ಕೌಸಲ್ಯಳ ತೊಡೆಯ ಮೇಲೆ ಕುಳಿತಿರುವಂತೆ ಇದ್ದಿರಬೇಕು ಎಂದು ಹೇಳಿದ್ದಾರೆ.
ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆಂದರೆ, ವಿವಾದ ಉಂಟಾಗಿ ಒಡೆದು ಹೋಗಿರುವ ರಾಮಲಾಲಾ ಪ್ರತಿಮೆ ಎಲ್ಲಿದೆ? ಇನ್ನೊಂದು ಪ್ರತಿಮೆಯ ಅಗತ್ಯ ಏನಿತ್ತು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ್ ಜಿ ಮಹಾರಾಜ್ ಕೂಡ ಹಳೆಯ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು ಎಂದು ಸಲಹೆ ನೀಡಿದ್ದರು. ರಾಮಜನ್ಮಭೂಮಿ ದೇವಸ್ಥಾನದ ವಿಗ್ರಹವು ಮಗುವಿನ ರೂಪದಲ್ಲಿರಬೇಕು ಮತ್ತು ಮಾತೆಯ ಕೌಶಲ್ಯೆಯ ಮಡಿಲಲ್ಲಿರಬೇಕು, ಆದರೆ ದೇವಾಲಯದಲ್ಲಿ ಇರಿಸಲಾಗಿರುವ ವಿಗ್ರಹವು ಮಗುವಿನ ರೂಪದಲ್ಲಿ ಕಂಡುಬರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಮುನ್ನ, ಗುರುವಾರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಇರಿಸಲಾಗಿದೆ. ಅದರ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.