ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಟಿ ರನ್ಯಾರಾವ್ಗೆ ಸಂಬಂಧಿಸಿದ ಚಿನ್ನ ಕಳ್ಳಸಾಗಣೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರರಾವ್ ಅವರಿಗೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಸರ್ಕಾರಿ ವಾಹನ ದುರ್ಬಳಕೆ ಆರೋಪದಡಿ ಚಾರ್ಜ್ ಮೆಮೋ ನೀಡಲಾಗಿತ್ತು. ತನಿಖೆಯ ಪ್ರಕಾರ, ರನ್ಯಾರಾವ್ ಅವರು ಸರ್ಕಾರಿ ಕಾರನ್ನು ಖಾಸಗಿ ಉದ್ದೇಶಗಳಿಗೆ ಬಳಸಿದ್ದಾರೆಯೇ ಎಂಬ ಅಂಶದ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ವಿಚಾರಣೆಯನ್ನು ಮತ್ತಷ್ಟು ವಿಸ್ತರಿಸಿವೆ.
ಇದರ ನಡುವೆಯೇ ರಾಮಚಂದ್ರರಾವ್ ವಿರುದ್ಧದ ರಾಸಲೀಲೆ ಪ್ರಕರಣಕ್ಕೂ ಇಲಾಖೆ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಅವರು ಐಜಿಪಿಯಾಗಿದ್ದ ಅವಧಿಯಲ್ಲಿ ಕಚೇರಿಯಲ್ಲಿ ಸಮವಸ್ತ್ರದಲ್ಲೇ ಅಸಭ್ಯ ವರ್ತನೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ಇಲಾಖಾ ತನಿಖೆಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಡಿಆರ್ಐ ಅಧಿಕಾರಿಗಳು ರಾಮಚಂದ್ರರಾವ್ ಅವರನ್ನು ವಿಚಾರಣೆ ನಡೆಸಿದ್ದು, ಮಗಳೊಂದಿಗೆ ಅವರ ಸಂಬಂಧ, ಚಿನ್ನ ಸಾಗಾಟದ ವೇಳೆ ಯಾವುದೇ ರೀತಿಯ ಸಹಾಯ ನೀಡಲಾಗಿತ್ತೇ, ಪ್ರೋಟೋಕಾಲ್ ಸೌಲಭ್ಯಗಳ ದುರ್ಬಳಕೆ ನಡೆದಿದೆಯೇ ಎಂಬ ಅಂಶಗಳನ್ನು ಸವಿವರವಾಗಿ ಪ್ರಶ್ನಿಸಿದ್ದಾರೆ.


