ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಕೆಲವು ಬೇಡಿಕೆಗಳನ್ನು ಈಡೇರಿಸಲು ಕೋರ್ಟ್ ಸಮ್ಮತಿಸಿದ್ದು, ಬಿಗ್ ರಿಲೀಫ್ ದೊರೆತಂತಾಗಿದೆ.
ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಕಾರಣಗಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೊಲೆ ಆರೋಪಿ ದರ್ಶನ್ಗೆ ಜೈಲಿನ ಆವರಣದಲ್ಲಿ ಓಡಾಡಲು ಅನುಮತಿ ಕೊಟ್ಟಿದೆ.
ಹೆಚ್ಚುವರಿ ದಿಂಬು ಹಾಗೂ ಬೇಡ್ಶೀಟ್ಗಾಗಿ ದರ್ಶನ್ ಮಾಡಿದ್ದ ಮನವಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಪುರಸ್ಕರಿಸಿದೆ. ದರ್ಶನ್ಗೆ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡಲು ಅನುಮತಿ ನೀಡಿದೆ. ಆದರೆ, ಜೈಲಿನ ಕೈಪಿಡಿ ಅನುಸರಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿಯಿಂದ ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಬೇರೆ ಜೈಲಿಗೆ ಸ್ಥಳಾಂತರಿಸಲು ಐಜಿ ಕ್ರಮ ಕೈಗೊಳ್ಳಬಹುದು ಎಂದೂ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.
ವಿಷ ಕೊಡಿ ಎಂದಿದ್ದ ದರ್ಶನ್
ತೀರ್ಪಿಗೂ ಮುನ್ನ ವಿಚಾರಣೆ ವೇಳೆ ಜಡ್ಜ್ ಬಳಿ ಮನವಿ ಮಾಡಿದ್ದ ದರ್ಶನ್, ‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ, ನನಗೆ ಮಾತ್ರ ವಿಷ ನೀಡಲಿ. ಕೋರ್ಟ್ನಿಂದಲೇ ಈ ಆದೇಶ ನೀಡಬೇಕು’ ಎಂದು ಮನವಿ ಮಾಡಿದ್ದರು.