ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಸೇರಿದಂತೆ ಎಂಟು ಆರೋಪಿಗಳ ಭವಿಷ್ಯ ಈಗ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಿಂತಿದ್ದು, ಮುಂದಿನ 10 ದಿನಗಳಲ್ಲಿ ಅವರ ಪರಿಸ್ಥಿತಿ ನಿರ್ಣಾಯಕವಾಗಿ ಬದಲಾಯಿಸಬಹುದು. ದರ್ಶನ್, ಪವಿತ್ರಾ ಗೌಡ ಮತ್ತು ಇತರ 6 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಇಂದು ವಿಚಾರಣೆ ನಡೆಸಿದ ನ್ಯಾಯಪೀಠ, ತೀರ್ಪನ್ನು ಮುಂದೂಡಿದ್ದು, 10 ದಿನಗಳ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.
ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೂ ಈಗ ಮುಂದಿನ ದಿನಗಳು ಸಾಕಷ್ಟು ಟೆನ್ಷನ್ನೊಂದಿಗೆ ಸಾಗಲಿವೆ. ಈ ಮಧ್ಯೆ, ಚಿತ್ರನಟಿ ಹಾಗೂ ಮಾಜಿ ಸಂಸದಿಯೂ ಆದ ರಮ್ಯಾ (ದಿವ್ಯ ಸ್ಪಂದನ) ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ, ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ. ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ’ ಎಂಬ ಹೇಳಿಕೆಯಿಂದ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಅವರ ಅಭಿಪ್ರಾಯವೇನು ಎಂಬುದನ್ನು ಅಭಿಮಾನಿಗಳು ವಿಭಿನ್ನವಾಗಿ ವಿಶ್ಲೇಷಿಸುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಒಂದು ಕಾಲದಲ್ಲಿ ‘ಕ್ವೀನ್’ ಎಂದು ಕರೆಯಲ್ಪಟ್ಟಿದ್ದ ರಮ್ಯಾ, ಈ ಹತ್ಯೆ ಪ್ರಕರಣದ ಬಗ್ಗೆ ಈ ಮೊದಲೇ ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.