ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಮಂತ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಸಾಲ ಕೊಡುವುದಾಗಿ ಕೊಟ್ಯಂತರ ರೂ ಹಣ ಪಡೆದು ವಂಚನೆ ಮಾಡುತ್ತಿದ್ದ ನಟೋರಿಯಸ್ ರೋಹನ್ ಸಲ್ಡಾನಾ ಎಂಬಾತನನ್ನ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದಾಜು 200 ಕೋಟಿ ರೂ. ವಂಚನೆ ಮಾಡಿದ್ದಾನೆ. ಪೊಲೀಸ್ ದಾಳಿಯ ಸಮಯದಲ್ಲಿ, ಅಧಿಕಾರಿಗಳು ಅಪರಾಧ ದಾಖಲೆಗಳು, ಖಾಲಿ ಚೆಕ್ಗಳು, 667 ಗ್ರಾಂ ಚಿನ್ನದ ಆಭರಣಗಳು ಮತ್ತು 2.75 ಕೋಟಿ ರೂ. ಮೌಲ್ಯದ ವಜ್ರದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ.
ಸಲ್ದಾನ ತನ್ನನ್ನು ಉದ್ಯಮಿಯೆಂದು ಬಿಂಬಿಸಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಕೆ ಹುಟ್ಟಿಸುತ್ತಿದ್ದ. ತನ್ನೂರು ಜಪ್ಪಿನಮೊಗರಿನಲ್ಲಿರುವ ಐಷಾರಾಮಿ ಬಂಗಲೆಗೆ ಕರೆದು ವ್ಯವಹರಿಸುತ್ತಿದ್ದ. ಈತನ ಬಂಗಲೆ, ಜೀವನಶೈಲಿ ನೋಡಿ ಉದ್ಯಮಿಗಳು ಆತನನ್ನು ನಂಬಿ ವ್ಯವಹಾರ ಮುಂದುವರಿಸುತ್ತಿದ್ದರು.
ಮೊದಲ ಸುತ್ತಿನ ಮಾತುಕತೆ ಮುಗಿದ ಬಳಿಕ ಉದ್ಯಮಿಗಳನ್ನು ವಂಚನಾ ಚಾಲಕ್ಕೆ ಬೀಳಿಸಲು ಪ್ರಾರಂಭಿಸುತ್ತಿದ್ದ. 50ರಿಂದ 100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡಮೊತ್ತದ ವ್ಯವಹಾರಕ್ಕೆ 5- 10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ನೀಡಬೇಕೆಂದು ಬೇಡಿಕೆ ಇರಿಸುತ್ತಿದ್ದನು. ಈತನ ಬಣ್ಣದ ಮಾತಿಗೆ ಮರುಳಾದ ಉದ್ಯಮಿಗಳು ಸುಲಭದಲ್ಲಿ ಸಾಲ ಅಥವಾ ಕಡಿಮೆ ದರಕ್ಕೆ ಭೂಮಿ ಸಿಗುತ್ತಿದೆ ಎಂದು ಕೋಟ್ಯಂತರ ರೂ. ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದರು. ಹಣ ವಸೂಲಿಯಾದ ಬಳಿಕ ನಾನಾ ನೆಪ ಹೇಳಿ ದೂರವಾಗುತ್ತಿದ್ದನು.ಈತ 3 ತಿಂಗಳಲ್ಲೇ ಬರೋಬ್ಬರಿ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಅನೇಕ ವರ್ಷಗಳಿಂದ 200 ಕೋಟಿ ರೂ. ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಕೆಲವೊಂದು ಪ್ರಕರಣದ ವಿಚಾರಣೆಗಾಗಿ ಪೊಲೀಸರು ಈತನ ಮನೆಗೆ ಹೋಗುತ್ತಿದ್ದರು. ಹಾಗೆ ಹೋದಾಗ ಮನೆಯೊಳಗಿರುವ ಅಡಗುದಾಣದಲ್ಲಿ ಬಚ್ಚಿಟ್ಟು ಕುಳಿತುಕೊಳ್ಳುತ್ತಿದ್ದ. ಮನೆಯ ಸುತ್ತ 10ಕ್ಕೂ ಅಧಿಕ ದೊಡ್ಡ ಸಿಸಿಟಿವಿ ಕ್ಯಾಮೆರಾ ಇದ್ದು, ಪೊಲೀಸರು ಬುರುವುದನ್ನು ನೋಡಿಯೇ ಎಸ್ಕೆಪ್ ಆಗುತ್ತಿದ್ದ ಎನ್ನಲಾಗಿದೆ. ಆದ್ರೆ ಗುರುವಾರ ನಡೆಸಿದ ದಾಳಿ ವೇಳೆ ಪೊಲೀಸರು ಅಡಗುದಾಣದ ಗೋಡೆಯನ್ನು ಒಡೆದು ಒಳನುಗ್ಗಿದ್ದರು. ಈ ವೇಳೆ ಮನೆಯಲ್ಲಿ ಮಲೇಷ್ಯಾದ ಯುವತಿಯೊಬ್ಬಳು ಮತ್ತು 5 ಮಂದಿ ಕಾರ್ಮಿಕರು ಪತ್ತೆಯಾಗಿದ್ದಾರೆ.