SHOCKING | ಏಕಾಏಕಿ ಅಂಗಡಿಗೆ ನುಗ್ಗಿ 2 ಕೋಟಿ ರೂ. ದೋಚಿದ ದುಷ್ಕರ್ಮಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಾಡಹಗಲೇ 2 ಕೋಟಿ ರೂ ಹಣ ದರೋಡೆ ಮಾಡಿರುವಂತಹ ಘಟನೆ ಜೂನ್​ 25ರಂದು ಬೆಂಗಳೂರಿನ ವಿದ್ಯಾರಣ್ಯಪುರಂನ ಎಂ.ಎಸ್.ಪಾಳ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಯುಎಸ್​​​​ಡಿಟಿಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ದರೋಡೆ ಮಾಡಲಾಗಿದೆ. ಕೆಂಗೇರಿ ನಿವಾಸಿ ಶ್ರೀಹರ್ಷ 2 ಕೋಟಿ ರೂ. ಹಣ ಕಳೆದುಕೊಂಡವರು. ಸದ್ಯ ವಿದ್ಯಾರಣ್ಯಪುರಂ ಪೊಲೀಸ್​​ ಠಾಣೆಯಲ್ಲಿ  ದೂರು ದಾಖಲಾಗಿದ್ದು, ದರೋಡೆ ನಡೆಸಿದ ಗ್ಯಾಂಗ್​​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಶ್ರೀಹರ್ಷ ಅವರ ಹೊಸ ಕಂಪನಿಗೆ ಜಪಾನ್​ನಿಂದ ಯಂತ್ರ ಬೇಕಾಗಿರುತ್ತೆ. ಹೀಗಾಗಿ ಯುಎಸ್​​​​ಡಿಟಿಗೆ ಹಣ ಕನ್ವರ್ಟ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಎಂಬಾತ ಪರಿಚಯ ಆಗಿದ್ದ. ಜೂ.25ರ ಮಧ್ಯಾಹ್ನ 3 ಗಂಟೆಗೆ ಎಕೆ ಎಂಟರ್​​ಪ್ರೈಸ್ ಶಾಪ್‌ನಲ್ಲಿ ಶ್ರೀಹರ್ಷ ಮತ್ತು ಬೆಂಜಮಿನ್ ಭೇಟಿಯಾಗಿದ್ದರು.

ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು ಹಣ ಎಣಿಕೆ ಮಾಡುತ್ತಿದ್ದರು. ಇದೇ ವೇಳೆ 6-7 ಅಪರಿಚಿತರ ಗುಂಪು ಏಕಾಏಕಿ ಶಾಪ್​ಗೆ ನುಗ್ಗಿದೆ. ಶ್ರೀಹರ್ಷ ಮೇಲೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ 2 ಕೋಟಿ ರೂ ಹಣ ಚೀಲದಲ್ಲಿ ತುಂಬಿಕೊಂಡು ಅವರನ್ನು ಕೂಡಿ ಹಾಕಿ ಪರಾರಿ ಆಗಿದ್ದಾರೆ.

ಶಾಪ್​ನಿಂದ ಹೊರಬಂದಾಗ ಬೆಂಜಮಿನ್ ಮತ್ತು ಸ್ನೇಹಿತರು ಕೂಡ ಪರಾರಿ ಆಗಿದ್ದು, ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್​​ ಠಾಣೆಗೆ ಬೆಂಜಮಿನ್ ಮತ್ತು ಇತರರ ವಿರುದ್ಧ ಶ್ರೀಹರ್ಷ ದೂರು ನೀಡಿದ್ದಾರೆ. ಸದ್ಯ ಬೆಂಜಮಿನ್ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!