ಹೊಸದಿಗಂತ, ಮಡಿಕೇರಿ:
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆಯಲ್ಲಿ ನಡೆದ ಮನೆ ಕಳವು ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂರ್ನಾಡು ಸಮೀಪದ ಬಲಮುರಿ ನಿವಾಸಿ ಸುದೀಪ್.ಟಿ.ಎಸ್ (23 ) ಎಂ.ಬಾಡಗ ನಿವಾಸಿ
ನಿಶಾಂತ್.ಎಂ.ಎಂ (27) ಮತ್ತು ನಾಸೋಕ್ಲು ಹಳೆ ತಾಲೂಕು ನಿವಾಸಿ ಇಬ್ರಾಹಿಂ ( 29) ಬಂಧಿತ ಆರೋಪಿಗಳಾಗಿದ್ದು, ಇವರು ಕಳವು ಮಾಡಿರುವ 30 ಗ್ರಾಂ 630 ಮಿಲಿ ಚಿನ್ನಾಭರಣ ಮತ್ತು 4,860/ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಾಜೆ ಗ್ರಾಮದ ಕೆ.ಕೆ. ವಿಜಯಕುಮಾರ್ ಅವರು ಫೆ.8ರಂದು ಕೆಲಸದ ನಿಮಿತ್ತ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ಅಪರಿಚಿತ ವ್ಯಕ್ತಿಗಳು ಮನೆಯ ಬಾಗಿಲ ಬೀಗವನ್ನು ಮುರಿದು ಗಾಡ್ರೆಜ್’ನಲ್ಲಿದ್ದ ಅಂದಾಜು 47 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 20 ಸಾವಿರ ರೂ. ನಗದನ್ನು ಕಳವು ಮಾಡಿದ್ದರು.
ಆರೋಪಿಗಳನ್ನು ಪತ್ತೆ ಹಚ್ಚಲು ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಇನ್ಸ್ಪೆಕ್ಟರ್ ಯು.ಉಮೇಶ್, ಗ್ರಾಮಾಂತರ ಠಾಣಾಧಿಕಾರಿ ರಮೇಶ ಕರಕಿಕಟ್ಟಿ, ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳು ಹಾಗೂ ಶ್ವಾನದಳ ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಮಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಆರೋಪಿಗಳು ಫೆ.9ರಂದು ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮದಲಾಪುರ ಗ್ರಾಮ ನಿವಾಸಿಯಾದ ಡಿ.ಜೀವನ್ ಅವರ ಮನೆಯ ಬಾಗಿಲ ಬೀಗವನ್ನು ಮುರಿದು ಗಾಡ್ರೇಜ್’ನಲ್ಲಿದ್ದ ಅಂದಾಜು 100 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ . 1.20 ಲಕ್ಷ ರೂ. ನಗದು ಮತ್ತು ಜಾಗ/ಜಮೀನಿನ ಮೂಲ ದಾಖಲಾತಿಗಳನ್ನು ಕಳವು ಮಾಡಿರುವುದು ತನಿಖೆಯ ಸಂದರ್ಭ ಬೆಳಕಿಗೆ ಬಂದಿದೆ.
ಈ ಪೈಕಿ 59 ಗ್ರಾಂ 790 ಮಿಲಿ ಚಿನ್ನಾಭರಣಗಳನ್ನು ಮತ್ತು ರೂ. 5990ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಆರೋಪಿಗಳು ಮಂಗಳೂರು, ಹಾಸನ, ಮದ್ದೂರು, ಚನ್ನಪಟ್ಟಣ, ರಾಮನಗರ ಮುಂತಾದ ಕಡೆ ಕಳವು ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.