ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿ.ಎಸ್. ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದ ‘ನಾನು ಅವನಲ್ಲ ಅವಳು’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಚಿತ್ರರಂಗದ ಖ್ಯಾತ ನಟ ಸಂಚಾರಿ ವಿಜಯ್ ಅಗಲಿ ಎರಡು ವರ್ಷ ಕಳೆದಿದ್ದು, ಸಂಚಾರಿ ವಿಜಯ್ ಅವರ 2ನೇ ವರ್ಷದ ಪುಣ್ಯ ಸ್ಮರಣೆಯನ್ನು ಭಾನುವಾರ ವಿಜಯ್ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ನಡೆಸಲಾಯಿತು.
ತಲೆತಂಡ, ನಾತಿಚರಾಮಿ, ನಾನು ಅವನಲ್ಲ ಅವಳು, ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ್ದ ನಟ ಸಂಚಾರಿ ವಿಜಯ್ ಅವರು ನಿಧನರಾದಾಗ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಜನರಿಗೆ ಮಾದರಿಯಾಗಿದ್ದರು.
ಸಂಚಾರಿ ವಿಜಯ್ ಅವರ ಕುಟುಂಬ, ಸಂಚಾರಿ ವಿಜಯ್ ಗೆಳೆಯರ ಬಳಗ, ಸಂಚಾರಿ ವಿಜಯ್ ಕಲಾ ಸಂಘ, ಸಂಚಾರಿ ವಿಜಯ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್, ತಾಲೂಕ ಘಟಕ ಕಡೂರು ಇವರ ಸಂಯುಕ್ತ ಆಶ್ರಯದಡಿ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಕಡೂರು ತಾಲೂಕು, ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ಸಮಾಧಿ ವಿಜಯನಿಧಿ ಬಳಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಕ್ತದಾನ ಶಿಬಿರವನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದ್ದು, ಪಂಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಗಂಗನಾಯ್ಕ್ ಅಧ್ಯಕ್ಷತೆ ವಹಿಸಲಿದ್ದರು. ವಿಜಯ್ ಕುಟುಂಬದ ಜೊತೆ ಸಂಚಾರಿ ತಂಡದ ಎನ್. ಮಂಗಳಾ, ನಿರ್ದೇಶಕರಾದ ಮಂಸೋರೆ ಹಲವರು ವಿಜಯ್ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.