ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದಲ್ಲಿ ಸದ್ದು ಮಾಡಿದ ಹೇಮಾ ಕಮಿಟಿಯ ವರದಿ ಇತರೆ ಸಿನಿಮಾರಂಗಕ್ಕೂ ಬಿಸಿ ಮುಟ್ಟಿಸಿದೆ. ಇದಾದ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ನಟಿಯರು, ಕಲಾವಿದೆಯರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಸ್ಯಾಂಡಲ್ವುಡ್ನಲ್ಲಿ ಹೇಮಾ ಕಮಿಟಿಯಂತೆ ಒಂದು ಕಮಿಟಿ ರಚನೆ ಮಾಡಬೇಕು ಅನ್ನೋ ಕೂಗು ಕೇಳಿಬಂದಿದೆ.
ಇಂದು ಫಿಲ್ಮಂ ಚೇಂಬರ್ನಲ್ಲಿ ಈ ಕುರಿತ ಮಹತ್ವದ ಸಭೆ ನಡೆದಿದ್ದು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಎನ್.ಎಮ್. ಸುರೇಶ್ ನೇತೃತ್ವದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ N.M ಸುರೇಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕಿ ಕವಿತಾ ಲಂಕೇಶ್, ನಟಿಯರಾದ ನೀತು ಶೆಟ್ಟಿ, ಭಾವನಾ ರಾಮಣ್ಣ, ಸಂಜನಾ ಗಲ್ರಾನಿ, ನಟಿ ತಾರಾ ಅನುರಾಧ, ಅನಿತಾ ಭಟ್, ಅಶ್ವಿನಿ ಗೌಡ, ವಾಣಿಶ್ರೀ, ಸಿಂಧು ಲೋಕನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಲಾವಿದೆಯರ ಜೊತೆಗಿನ ಸಭೆ ಬಳಿಕ ಫಿಲ್ಮಂ ಚೇಂಬರ್ನಲ್ಲಿ ಸುದ್ದಿಗೋಷ್ಟಿ ನಡೆಸಲಾಯಿತು. ಈ ವೇಳೆ ಮಾತನಾಡಿದ ನಾಗಲಕ್ಷ್ಮಿ ಚೌಧರಿ ಅವರು ಕನ್ನಡ ಚಿತ್ರರಂಗದಲ್ಲೂ ಕಮಿಟಿ ಬೇಕಾ ಬೇಡವಾ ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಮಹಿಳೆಯರ ಸಂವಿಧಾನದ ಹಕ್ಕುಗಳನ್ನು ಕಾಪಾಡೋದು ನಮ್ಮ ಹಕ್ಕು. ಮಹಿಳಾ ಆಯೋಗದ ಮೂಲಕ ಒಂದು ಸಮಿತಿ ರಚನೆ ಆಗಬೇಕು ಅಂತ ತಿಳಿಸಿದ್ದೀವಿ. ಈ ಸಭೆಗೆ ಸಾಕಷ್ಟು ನಟಿಯರು ಬಂದಿಲ್ಲ. ಸಿನಿಮಾದಲ್ಲಿ ಮಹಿಳೆಯರು ಅಂದ್ರೆ ಬರೀ ನಟಿಯರಷ್ಟೇ ಅಲ್ಲ. ಸಾಕಷ್ಟು ವಿಭಾಗಗಳಲ್ಲಿ ಮಹಿಳೆಯರು ಕೆಲಸ ಮಾಡ್ತಿದ್ದಾರೆ. ಮುಂದಿನ ಸಭೆಯಲ್ಲಿ ಎಲ್ಲಾ ನಟಿಯರು ಭಾಗಿ ಆಗಬೇಕು. ನಾನು 17 ಪಾಯಿಂಟ್ಸ್ ಮಾಡಿ, ವಾಣಿಜ್ಯ ಮಂಡಳಿಗೆ ಸಲ್ಲಿಸಿದ್ದೀನಿ ಎಂದರು.
ಇದೇ ವೇಳೆ, ಸೆಟ್ನಲ್ಲಿ ಕಲಾವಿದೆಯರಿಗೆ ಟಾಯ್ಲೆಟ್ ವ್ಯವಸ್ಥೆ ಇರ್ಲಿಲ್ಲ. ಇದರಿಂದ ಕಲಾವಿದೆಯರಿಗೆ ನೀರು ಕೂಡ ಕೊಡುತ್ತಿರಲಿಲ್ಲ ಅನ್ನೋ ಮಾತು ಕೇಳಿ ಬಂದಿದೆ. ನೀರು ಕೊಟ್ಟರೆ ಟಾಯ್ಲೆಟ್ಗೆ ಹೋಗಬೇಕಾಗುತ್ತೆ. ಹೀಗಾಗಿ ದಾಹವಾದ್ರೂ ಕಲಾವಿದೆಯರಿಗೆ ನೀರು ಕೊಡ್ತಿರಲಿಲ್ಲವಂತೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿಕೆ ನೀಡಿದ್ದಾರೆ.