ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಳ ವ್ಯಕ್ತಿತ್ವದ ಮಹಾನ್ ಸಂತ, ಸಿದ್ದೇಶ್ವರ ಸ್ವಾಮಿಗಳು ತೋರಿಸಿರುವ ಬದುಕಿನ ಸತ್ಯ-ಸೌಂದರ್ಯಗಳಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಸಮಾಜದ ಎಲ್ಲ ವರ್ಗದವರಿಗೂ ಮನ ಮುಟ್ಟುವಂತೆ ಪ್ರವಚನ ನೀಡಿ ಎತ್ತರಕ್ಕೇರಿದ ಅವರು ಎಂದಿಗೂ ಪ್ರೇರಕ ಎಂದು ಸಂಗಮೇಶ ಪೂಜಾರ್ ತಿಳಿಸಿದರು.
ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಪರಿಷತ್ನ ಸಾಹಿತ್ಯ ವಿಭಾಗ ನಡೆಸುತ್ತಿರುವ ಕನ್ನಡ ಪುಸ್ತಕ ಪ್ರದರ್ಶನ ಹಬ್ಬದಲ್ಲಿ ಆಯೋಜಿಸಿದ್ದ, ‘ಸರಳತೆಯ ಸಾಕಾರಮೂರ್ತಿ; ಜ್ಞಾನದ ಉನ್ನತ ಶಿಖರ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಯಾವ ಇತಿಹಾಸ ಪುಸ್ತಕದಲ್ಲೂ ಇರದ ವಿಶೇಷ ಮಾಹಿತಿ ಅವರ ಪ್ರವಚನಗಳಲ್ಲಿ ಸಿಗುತ್ತಿತ್ತು ಎಂದರು.
ಯಾರ ಬಗೆಗೂ ನಕಾರಾತ್ಮಕ ವಿಷಯಗಳನ್ನು ಪ್ರಸ್ತಾಪಿಸದೇ, ಸಕಾರಾತ್ಮಕತೆಯೊಂದನ್ನೇ ಎತ್ತಿಹಿಡಿಯುವ ಅವರ ಸಮಗ್ರ ದೃಷ್ಟಿ ಸಮಾಜದ ವಿಕಸನ ದೃಷ್ಟಿಗೆ ಕೈದೀವಿಗೆಯಾಗುವಂತದ್ದು. ತಾವು ನಂಬಿದ ವಿಚಾರಧಾರೆಗಳಿಗೆ ಎಂದಿಗೂ ವಿರುದ್ದವಾಗಿ ಬದುಕಿದ್ದವರು. ಅವರ ಪ್ರತಿಯೊಂದು ಪ್ರವಚನಗಳೂ ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರಮಟ್ಟದ ಎಚ್ಚರದ ಸಂಕೇತಗಳಾಗಿದ್ದವು ಎಂದು ವಿಶ್ಲೇಷಿಸಿದರು.
ಬದುಕಿನ ಶ್ರೀಮಂತಿಕೆ ವಿಶ್ವಚಿಂತನೆ, ಸತ್ಯಶೋಧಗಳಲ್ಲಿ ಅಡಕವಾಗಿದೆ. ಅದು ಅನುಭವ ಪ್ರವಾಹ ಎಂಬ ಪ್ರಜ್ಞೆಯನ್ನು ಶ್ರೀಗಳು ಸಾರಿದರು. ಬದುಕಿನ ಸೌಂದರ್ಯ ರಾಗ, ದ್ವೇಷ ರಹಿತ ತ್ಯಾಗದ ಸಂಕೇತವಾಗಬೇಕು. ಅನುಭವಗಳನ್ನು ಸಕಾರಾತ್ಮಕವಾಗಿ ಹಂಚಿಕೊಳ್ಳುವುದೇ ಧರ್ಮವೆಂದು ಸಾರಿದವರು. ಇವರ ಸರಳ ಸಜ್ಜನಿಕೆ, ನಿಸರ್ಗದೊಂದಿಗೆ ಸಮ್ಮಿಳಿತವಾದ ನಿರಾಡಂಬರ ಆಧ್ಯಾತ್ಮಿಕ ಸಾಧನೆಗಳು ನಮ್ಮ ಮುಂದೆ ಬೆಳಕಾಗಿ ನಿಂತಿವೆ ಎಂದು ಸಂಗಮೇಶ ಪೂಜಾರ್ ತಿಳಿಸಿದರು.