ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಪೊಲೀಸ್ ಅಧಿಕಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.
ಸ್ಥಳೀಯ ಕ್ರಿಕೆಟ್ ಪಂದ್ಯದ ಕುರಿತು ಇಬ್ಬರ ನಡುವೆ ವಿವಾದ ನಡೆದಿತ್ತು. ಕೋಪದಲ್ಲಿ ಶಿಕ್ಷಕರೊಬ್ಬರು ಪೊಲೀಸ್ ಅಧಿಕಾರಿಗೆ ಗುಂಡು ಹಾರಿಸಿದ್ದು, ಅವರು ಅಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಮೃತರನ್ನು ಹೆಡ್ ಕಾನ್ಸ್ಟೆಬಲ್ ಅಜಯ್ ಪನ್ವರ್ ಎಂದು ಗುರುತಿಸಲಾಗಿದೆ. ಅವರು ಸಹರಾನ್ಪುರದಲ್ಲಿ ನಿಯೋಜನೆಗೊಂಡಿದ್ದರು. ಒಂದು ವಾರ ರಜೆ ಹಾಕಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಕೆಲವು ದಿನಗಳ ಹಿಂದೆ ಸ್ಥಳೀಯ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಅಜಯ್, ಅದೇ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಮೋಹಿತ್ ಜೊತೆ ವಾಗ್ವಾದ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ, ಅಜಯ್ ವಾಕಿಂಗ್ ಗೆಂದು ಹೊರಗೆ ಹೋಗಿದ್ದಾಗ, ಮೋಹಿತ್ ಜೊತೆ ಮತ್ತೊಮ್ಮೆ ಮಾತಿನ ಚಕಮಕಿ ನಡೆಯಿತು. ವಾಗ್ವಾದ ತೀವ್ರಗೊಂಡು, ಮೋಹಿತ್ ಗುಂಡು ಹಾರಿಸಿ ಅಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.