ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕ ಅವಗಡ ಸಂಭವಿಸಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರ ತಲೆಗೆ ಗಾಯವಾಗಿದೆ.
ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣಪತಿ ಮೂರ್ತಿಯ ಭವ್ಯ ಮೆರವಣಿಗೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದವು. ಮೆರವಣಿಗೆ ಆರಂಭವಾಗುವ ಮುನ್ನ ಸಾರ್ವಜನಿಕರ ದರುಶನಕ್ಕಾಗಿ ಗಣಪತಿ ಮೂರ್ತಿಯ ಮುಂಭಾಗ ಹಾಕಲಾಗಿದ್ದ ಪರದೆಯನ್ನು ತೆರೆಯುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಪರದೆಯನ್ನು ಸರಿಸುವ ವೇಳೆ ಅನಿರೀಕ್ಷಿತವಾಗಿ ಸ್ಕ್ರೀನ್ನ ಭಾರವಾದ ಕಬ್ಬಿಣದ ಕೊಂಡಿಯೊಂದು ಕಳಚಿ ನೇರವಾಗಿ ಅಲ್ಲಿಯೇ ನಿಂತಿದ್ದ ಶಾಸಕ ರವಿಕುಮಾರ್ ಅವರ ತಲೆಯ ಮೇಲೆ ಬಿದ್ದಿದೆ.
ಇದನ್ನೂ ಓದಿ:
ಕೊಂಡಿ ಬಿದ್ದ ರಭಸಕ್ಕೆ ಶಾಸಕರ ತಲೆಯಿಂದ ರಕ್ತ ಒಸರಿದ್ದು, ಸ್ಥಳದಲ್ಲಿದ್ದ ಬೆಂಬಲಿಗರು ಹಾಗೂ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಮೂಡಿತ್ತು. ತಕ್ಷಣವೇ ಅವರನ್ನು ಮಂಡ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಕೂಡಲೇ ವೈದ್ಯರು ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.



