ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಸಂಬಂಧ ಮೊಬೈಲ್ ಪತ್ತೆ ಹಚ್ಚಲು ಪೊಲೀಸರು ಆರೋಪಿಯನ್ನು ಮತ್ತೆ ಸ್ಥಳ ಮಹಜರು ಮಾಡಲು ಸುಮನಹಳ್ಳಿ ಸತ್ವ ಅಪಾರ್ಟ್ಮೆಂಟ್ ಮುಂಭಾಗದಲ್ಲಿರುವ ರಾಜಕಾಲುವೆ ಬಳಿ ಕರೆ ತಂದಿದ್ದಾರೆ.
ಕೊಲೆ ಪ್ರಕರಣದಲ್ಲಿ ಮೊಬೈಲ್ ಪ್ರಮುಖ ಸಾಕ್ಷ್ಯವಾಗುವ ಕಾರಣ ಪೊಲೀಸರು ಎಲ್ಲಾ ಕಡೆ ಆತನ ಮೊಬೈಲ್ ಹುಡುಕಾಡಿದ್ದಾರೆ. ಎಲ್ಲಿಯೂ ಮೊಬೈಲ್ ಸಿಗದ ಕಾರಣ ಪೊಲೀಸರು ಕೊನೆಯ ಬಾರಿಗೆ ಸಿಗ್ನಲ್ ಇದ್ದ ಜಾಗವನ್ನು ಸರ್ಚ್ ಮಾಡಿದ್ದಾರೆ. ರಾಜಕಾಲುವೆ ಜಾಗದಲ್ಲೇ ಕೊನೆಯ ಬಾರಿಗೆ ಸಿಗ್ನಲ್ ತೋರಿಸಿದೆ.
ಈ ಕಾರಣಕ್ಕೆ ಆರೋಪಿ ಪ್ರದೂಶ್ನನ್ನು ಮತ್ತೆ ಸುಮನಹಳ್ಳಿ ಸತ್ವ ಅಪಾರ್ಟ್ಮೆಂಟ್ ಮುಂಭಾಗದಲ್ಲಿರುವ ರಾಜಕಾಲುವೆ ಬಳಿ ಕರೆ ತಂದು ಶವ ಎಸೆದ ಜಾಗದತ್ತ ಕರೆತಂದಿದ್ದಾರೆ. ಪೊಲೀಸರ ಮನವಿಯ ಮೇರೆಗೆ ಪೌರ ಕಾರ್ಮಿಕರು ರಾಜಕಾಲುವೆಗೆ ಇಳಿದು ಮೊಬೈಲ್ ಹುಡುಕಾಡಿದ್ದಾರೆ. ಆದರೆ ಮೊಬೈಲ್ ಪತ್ತೆಯಾಗದ ಕಾರಣ ಶೋಧ ಕಾರ್ಯ ನಿಲ್ಲಿಸಿದ್ದಾರೆ.
ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಹತ್ಯೆಗೈದು ಮೃತದೇಹವನ್ನು ಸುಮನಹಳ್ಳಿ ಸತ್ವಾ ಅಪಾರ್ಟ್ಮೆಂಟ್ ಬಳಿ ಇರುವ ರಾಜಕಾಲುವೆ ಬಳಿ ಬಿಸಾಕಿದ್ದರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಆರೋಪಿಗಳು ಶರಣಾಗಿದ್ದಾರೆ. ಆದರೆ ಪೊಲೀಸ್ ವಿಚಾರಣೆ ವೇಳೆ ರೇಣುಕಾಸ್ವಾಮಿ ಮೊಬೈಲ್ ಅನ್ನು ಸುಮನಹಳ್ಳಿ ರಾಜ ಕಾಲುವೆಗೆ ಬಿಸಾಕಿದ್ದಾಗಿ ಹೇಳಿದ್ದಾರೆ. ಈ ಹಿನ್ನೆಲೆ ಕಳೆದ ಹತ್ತು ದಿನಗಳಿಂದ ಹುಡುಕಾಡಿದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ.
ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಮೊಬೈಲ್ ಪ್ರಮುಖ ಸಾಕ್ಷಿಯಾಗಿದೆ. ಅಶ್ಲೀಲ ಕಮೆಂಟ್ ಸಂಬಂಧಪಟ್ಟಂತೆ ರೇಣುಕಾಸ್ವಾಮಿ ಮೊಬೈಲ್ನಲ್ಲೇ ಆರೋಪಿಗಳು ಕ್ಷಮೆಯ ವಿಡಿಯೋ ಮಾಡಿಸಿದ್ದರು ಎನ್ನಲಾಗಿದೆ. ಆರ್ಆರ್ ನಗರ, ಪಟ್ಟಣಗೆರೆ ಶೆಡ್, ಕಿಡ್ನಾಪ್ ಮಾಡಿದ ರವಿಯ ಇಟಿಯೋಸ್ ಕಾರು ಸೇರಿ ಹಲವು ಕಡೆ ಹುಡುಕಿದರೂ ಮೊಬೈಲ್ ಸುಳಿವು ಸಿಕ್ಕಿಲ್ಲ.