ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯ ಹಿರಿಯ ಛಾಯಾಗ್ರಾಹಕ ನಂದನ್ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನ ಹೊಂದಿದ್ದಾರೆ. 57 ವರ್ಷದ ನಂದನ್ ಕಳೆದ 6 ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.
ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಶಿವಮೊಗ್ಗ ನಂದನ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ ಶೋಭಾ, ಪುತ್ರ ಚಂದನ್ ಹಾಗೂ ಪುತ್ರಿ ಕೀರ್ತನ ಇದ್ದಾರೆ.
1999 ರಿಂದ ಶಿವಮೊಗ್ಗದ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ನಂದನ್ ಶಿವಮೊಗ್ಗ ನಂದನ್ ಎಂದೇ ಹೆಸರು ಪಡೆದಿದ್ದರು. ಛಾಯಾಗ್ರಾಹಕದಲ್ಲಿ ಸಾಕಷ್ಟು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದ ನಂದನ್ ಅವರು ತೆಗೆದ ಹಲವು ಛಾಯಾಚಿತ್ರಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದವು.
ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ನಂದನ್ ಅವರು ಕುವೆಂಪು ವಿಶ್ವವಿದ್ಯಾಲಯ ಧರ್ಮಸ್ಥಳದ ಎಸ್ಡಿಎಂ ಕಾಲೇಜ್ ಹಾಗೂ ಮೈಸೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ತರಗತಿಗಳನ್ನು ನಡೆಸುತ್ತಿದ್ದರು. ನಂದನ್ ಅವರ ಪರಿಸರ ಹಾಗೂ ವ್ಯಕ್ತಿ ಚಿತ್ರಗಳಿಗೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ.