ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣ ಆದಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇನ್ನು ಈ ಹೆದ್ದಾರಿಯಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಶೀಘ್ರದಲ್ಲೇ, ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯ ಸರ್ವಿಸ್ ರಸ್ತೆಯ ಬಳಕೆದಾರರು ಪಟ್ಟಣಗಳಿಗೆ ದೀರ್ಘ ತಿರುವುಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.
ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಪೂರ್ಣ ಸರ್ವೀಸ್ ರಸ್ತೆಯೇ ಇಲ್ಲ. ಇದು ರೈಲು ಮಾರ್ಗದಂತಹ ಅಡೆತಡೆಗಳಿಂದ ಕೂಡಿದ್ದು, ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇದೀಗ ವಾಹನಗಳು ಬಿಡದಿ, ಚನ್ನಪಟ್ಟಣ, ಮತ್ತು ಮದ್ದೂರಿನಂತಹ ಪಟ್ಟಣಗಳಿಗೆ ಭೇಟಿ ನೀಡಿ, ಅಲ್ಲಿಂದ ಹೆದ್ದಾರಿಯನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಮತ್ತು ಈ ಪ್ರದೇಶಗಳಿಗೆ ಆಗಮಿಸಬೇಕೆಂದರೆ ಸುತ್ತಾಡಿಕೊಂಡು ಬರಬೇಕಾಗುತ್ತದೆ.
ಇದರಿಂದ ವಾಹನ ಸವಾರರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೈಲ್ವೆ ಹಳಿಗಳಿಂದಾಗಿ ಸರ್ವಿಸ್ ರಸ್ತೆ ಸ್ಥಗಿತಗೊಂಡಿರುವ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲಿದೆ. ಇದು ಪೂರ್ಣಗೊಂಡ ನಂತರ, ಬಳಕೆದಾರರು ಯಾವುದೇ ತೊಂದರೆಯಿಲ್ಲದೆ ಮುಖ್ಯರಸ್ತೆಗೆ ಸಮಾನಾಂತರವಾದ ಸರ್ವಿಸ್ ರಸ್ತೆಯಲ್ಲಿ ಮೈಸೂರನ್ನು ತಲುಪಬಹುದು.