ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ತಕ್ಷಣವೇ ಮತ ಚಲಾಯಿಸುವಂತೆ ವಿರೋಧ ಪಕ್ಷದ ಶಾಸಕರ ಒತ್ತಾಯಕ್ಕೆ ಮಣಿಯದೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಗುರುವಾರ ಹಠಾತ್ತನೆ ಭಾನುವಾರಕ್ಕೆ ಮುಂದೂಡಲಾಯಿತು.
ಸಂಸತ್ ಭವನದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನ ಪ್ರಾರಂಭವಾದ ತಕ್ಷಣ, ಉಪ ಸ್ಪೀಕರ್ ಖಾಸಿಮ್ ಸೂರಿ ಅಜೆಂಡಾದಲ್ಲಿ ಪಟ್ಟಿ ಮಾಡಲಾದ ಅಂಶಗಳನ್ನು ಚರ್ಚಿಸಲು ಶಾಸಕರನ್ನು ಕೇಳಿದರು.ಆದರೆ, ಪ್ರತಿಪಕ್ಷದ ಶಾಸಕರು ಪ್ರಧಾನಿ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ತಕ್ಷಣವೇ ಮತ ಚಲಾಯಿಸುವಂತೆ ಒತ್ತಾಯಿಸಿದರು.
ಈ ವೇಳೆ ಗದ್ದಲ ಉಂಟಾದ ಹಿನ್ನೆಲೆ ಉಪ ಸ್ಪೀಕರ್ ಸೂರಿ ಅವರು ಸದನವನ್ನು ಭಾನುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ಮತ್ತೊಂದು ಕಡೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಂದು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಪಾಕಿಸ್ತಾನದ ಪ್ರಧಾನಿ ತಮ್ಮ ರಾಷ್ಟ್ರ ಭಾಷಣ ಮಾಡಲಿದ್ದಾರೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ. ಈ ಸಭೆಯಲ್ಲಿ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ಭಾಗವಹಿಸಲಿದ್ದಾರೆ.
ಸಂಪುಟ ಸದಸ್ಯರೊಂದಿಗೆ ತರಾತುರಿಯಲ್ಲಿ ಕರೆಯಲಾದ ಸಭೆಯಲ್ಲಿ ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲು “ವಿದೇಶಿ ಪಿತೂರಿ”ಯ ಪುರಾವೆಗಳನ್ನು ತೋರಿಸುತ್ತಿರುವ ಪತ್ರವನ್ನು ಹಂಚಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.