ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಗರ ಮತ್ತು ಸೊರಬ ತಾಲೂಕಿನಲ್ಲಿ ಅಡಿಕೆ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸಿ, ಅವರುಗಳಿಂದ 15.19 ಲಕ್ಷ ರೂ. ವೌಲ್ಯದ ಅಡಿಕೆ, ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
ಈ ಕುರಿತು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಬಂಧಿತರನ್ನು ಶಿಕಾರಿಪುರ ತಾಲೂಕು ಹರಗುವಳ್ಳಿ ಗ್ರಾಮದ ತುಕರಾಜ್(24), ಹನುಮಂತಪ್ಪ(24), ರಾಕೇಶ್(20), ಅಭಿಷೇಕ್ (20) ಹಾಗೂ ಶಿವಕುಮಾರ್(23) ಎಂದು ಗುರುತಿಸಲಾಗಿದೆ. ಇವರುಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಅಡಿಕೆ ಕಳುವನ್ನೇ ಮಾಡುತ್ತಿದ್ದರು ಎಂದು ತಿಳಿಸಿದರು.
ಇವರುಗಳಿಂದ ಒಟ್ಟು 08 ಕಳವು ಪ್ರಕರಣಗಳಿಗೆ ಸಂಬಂಧಿಸಿದ 8.19 ಲಕ್ಷ ರೂ. ವೌಲ್ಯದ ಕೆಂಪು ಅಡಿಕೆ, ಬಿಳಿ ಗೋಟು, ಚಾಲಿ ಅಡಿಕೆ, ಸಿಪ್ಪೆಗೋಟು ವಶಕ್ಕೆ ಪಡೆಯಲಾಗಿದೆ. 50,000 ರೂ. ನಗದು ದೊರೆತಿದೆ. ಕೃತ್ಯಕ್ಕೆ ಬಳಸಿದ್ದ 2.50 ಲಕ್ಷ ರೂ.ಗಳ ಟಾಟಾ ಏಸ್ ವಾಹನ ಹಾಗೂ 04 ಲಕ್ಷ ರೂ. ವೌಲ್ಯದ ಮಹೀಂದ್ರ ಪಿಕ್ ಅಪ್, ಲಾಂಗ್ ಮತ್ತು ಸ್ಟೀಲ್ ರಾಡನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರುಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.