ದಿಗಂತ ವರದಿ ಅಂಕೋಲಾ :
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಮಣ್ಣು ತೆರವು, ನಾಪತ್ತೆಯಾದವರ ಹುಡುಕುವ ಕಾರ್ಯ ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಧಿವೇಶನ ಇದ್ದರೂ ತಕ್ಷಣ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಕಾರ್ಯಾಚರಣೆಗೆ ಚುರುಕು ಮೂಡಿಸಬೇಕಿತ್ತು ಎಂದಿದ್ದಾರೆ.
ಭಾನುವಾರ ಹಾನಿಗೊಳಗಾದ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈಗ ತೆರವು ಕಾರ್ಯ ತ್ವರಿತಗೊಳಿಸುವಲ್ಲಿ ಸಹಕಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು ಭಾರತೀಯ ಸೇನಾ ತುಕಡಿ ಕಳಿಸಿದೆ ಎಂದರು.
ದುರ್ಘಟನೆ ಆದ ಆರು ದಿನಗಳ ನಂತರ ಸಿಎಂ ಸ್ಥಳಕ್ಕೆ ಬರುತ್ತಿದ್ದಾರೆ. ಸರ್ಕಾರ ತಕ್ಷಣ ನೊಂದವರ ನೋವಿಗೆ ಸ್ಪಂದಿಸಲಿ.ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ಒದಗಿಸಲಿ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಶಾಸಕ ದಿನಕರ ಶೆಟ್ಟಿ, ವಿ.ಪ ಸದಸ್ಯ ಗಣಪತಿ ಉಳ್ವೇಕರ್ ಮತ್ತಿತರರು ಇದ್ದರು.