ಹೊಸದಿಗಂತ ವರದಿ,ಶಿವಮೊಗ್ಗ :
ಶಿವಮೊಗ್ಗದ ಪೊಲೀಸ್ ಪೇದೆ ಸತೀಶ್ ದೇಶದ ಹಲವು ರಾಜ್ಯಗಳಿಗೆ ತೆರಳಿ ಬೈಕ್ ಸಂಚಾರದ ಮೂಲಕ ಸಂವಿಧಾನ ಮತ್ತು ಸಂಚಾರ ನಿಯಮದ ಅರಿವು ಮೂಡಿಸಲು ಹೊರಟಿದ್ದಾರೆ.
ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಜೀಪ್ ಚಾಲಕನಾಗಿರುವ ಕಾನ್ಸ್ಟೇಬಲ್ ಸತೀಶ್ ಈ ಮಹತ್ವಪೂರ್ಣ ಕಾರ್ಯದಲ್ಲಿ ತೊಡಗಿದ್ದು ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೈಕ್ ಸವಾರಿ ಆರಂಭಿಸಿದರು. ಸುಮಾರು 4 ಸಾವಿರ ಕಿ.ಲೋ ಮೀಟರ್ ಸಂಚರಿಸಿ ಸಂವಿಧಾನ, ಸಂಚಾರಿ ನಿಯಮ ಸೇರಿದಂತೆ ಹಲವು ವಿಚಾರಗಳ ಕುರಿತು ಜನರಲ್ಲಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಿದ್ದಾರೆ.
ಪ್ರಮುಖವಾಗಿ ಮಾನವ ಕಳ್ಳ ಸಾಗಾಣೆ, ಪೋಕ್ಸೋ ಪ್ರಕರಣ, ನಾಗರೀಕ ಕರ್ತವ್ಯ ಮತ್ತು ಹಕ್ಕು, ಸಂಚಾರ ನಿಯಮ ಪಾಲನೆ, ಬೇಟಿ ಪಡಾವೋ ಬೇಟಿ ಬಚವೋ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೈಕ್ ರೈಡ್ ಆರಂಭಿಸಿದ್ದಾರೆ.
ತಮ್ಮ ಸ್ವಂತ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಚಾರವನ್ನು ಪ್ರಾರಂಭಿಸಿ, ಪ್ರತಿ 50 ಕೀ.ಮಿ ಗಳಲ್ಲಿ ಒಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.
ಜಾಗೃತಿ ಕಾರ್ಯಕ್ರಮವನ್ನು ಸುಮಾರು 15 ದಿನಗಳ ಕಾಲ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ದೇಶ ಪರ್ಯಟನೆ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇನೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂವಿಧಾನ ಕುರಿತಾದ ಜಾಗೃತಿ ಹಾಗೂ ಪೋಲೀಸ್ ಇಲಾಖೆಯ ಅನೇಕ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೈಂಕರ್ಯಕ್ಕೆ ಮುಂದಾಗಿರುವ ಸತೀಶ್ರಿಗೆ ಶಿವಮೊಗ್ಗ ಜಿಲ್ಲೆಯ ಜನತೆ ಶುಭ ಹಾರೈಹಿಸಿದ್ದಾರೆ.