ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದರ ನಡುವೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟ ಶಾಸಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಕ್ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ಡಿಸಿಎಂ ಪ್ರಸ್ತಾವನೆ ಹೈಕಮಾಂಡ್ ಮುಂದೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಪ್ರಸ್ತಾವ ಹೈಕಮಾಂಡ್ಗೆ ತಲುಪಿಲ್ಲ
ಸರ್ಕಾರ ರಚನೆ ಕುರಿತು ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ, ಆದರೆ ಯಾವುದೇ ಪ್ರಸ್ತಾವನೆ ಪಕ್ಷದ ಹೈಕಮಾಂಡ್ಗೆ ತಲುಪಿಲ್ಲ. ಪ್ರಸ್ತಾವನೆ ಬಂದ ನಂತರ, ಎಷ್ಟು ಸಚಿವರು ಮತ್ತು ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು, ಅಧ್ಯಕ್ಷ ಸ್ಥಾನಗಳನ್ನು ಸಹ ತುಂಬಬೇಕೇ ಎಂಬುದರ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಮೊದಲ ಹಂತದಲ್ಲಿ ಕೆಲವರ ಆಯ್ಕೆ
ಮೊದಲ ಹಂತದಲ್ಲಿ ಕೆಲವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಬಳಿಕ 15 ದಿನಗಳು ಅಥವಾ ಒಂದು ತಿಂಗಳ ನಂತರ ಮತ್ತೊಂದು ಸುತ್ತಿನಲ್ಲಿ ಸಚಿವ ಸ್ಥಾನ ವಿಸ್ತರಣೆಯಾಗಲಿದೆ. ಈ ಕುರಿತು ಮೊದಲು ಸಿಎಂ ಲಿಸ್ಟ್ ಕೊಡಲಿ, ಎಷ್ಟು ಜನ ಸೇರಿಸಿಕೊಳ್ಳಬೇಕು ಅಂತಾ ಗೊತ್ತಾಗುತ್ತದೆ. ಜೂನ್ 3ರಂದು ಸಭೆ ಮಾಡಿ ನಿರ್ಧಾರವಾಗಲಿದೆ ಎಂದು ತಿಳಿಸಿದರು.



