ಹೊಸದಿಗಂತ ವರದಿ,ಮಂಗಳೂರು
ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯೆ ನಡೆದ ಕಾಳಗದಲ್ಲಿ ಗಾಯಗೊಂಡಿದ್ದ ಸುಮಾರು ಎರಡೂವರೆ ವರ್ಷ ಪ್ರಾಯದ ವಿಜಯಾ ಹೆಸರಿನ ಹುಲಿಮರಿಯೊಂದು ಸಾವನ್ನಪ್ಪಿದೆ.
20ದಿನಗಳ ಹಿಂದೆ ವಿಜಯಾ ಮತ್ತು ನಾಲ್ಕು ವರ್ಷದ ಹುಲಿ ಮರಿಯ ಮಧ್ಯೆ ಕಚ್ಚಾಟವಾಗಿತ್ತು. ಇದರಿಂದ ವಿಜಯಾ ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಹುಲಿಮರಿಗೆ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ. ವಿಷ್ಣು ದತ್, ಡಾ. ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಿದ್ದರು. ಇದರಿಂದ ಹುಲಿ ಚೇತರಿಸಿಕೊಂಡಿದ್ದು, ಸಹಜ ಸ್ಥಿತಿಗೆ ಮರಳಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ವಿಜಯಾಳ ಆರೋಗ್ಯ ಮತ್ತೆ ಹದಗೆಟ್ಟಿತ್ತು. ವೈದ್ಯಾಧಿಕಾರಿಗಳು ಶುಶ್ರೂಷೆ ನಡೆಸಿದರೂ ಫಲಿಸದೆ ಸೋಮವಾರ ಮೃತಪಟ್ಟಿದೆ.
ಸಾವನ್ನಪ್ಪಿದ ಹುಲಿ ಮರಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕಿಡ್ನಿ ಮತ್ತು ಅಂಗಾಂಗಳ ವೈಫಲ್ಯ ಕಂಡು ಬಂದಿದೆ ಎಂದು ಡಾ. ವಿಷ್ಣು ದತ್ ತಿಳಿಸಿದ್ದಾರೆ.
ಅಸುನೀಗಿದ ಹುಲಿಯ ಅಂಗಾಂಗಗಳ ಮಾದರಿಯನ್ನು ಸಾವಿನ ನೈಜ ಪರೀಕ್ಷೆಗಾಗಿ ಉತ್ತರ ಪ್ರದೇಶದ ಐ.ವಿ.ಆರ್.ಐ., ಬರೇಲಿ ಮತ್ತು ಬೆಂಗಳೂರಿನ ಐ.ಎ. ಎಚ್. ಆ್ಯಂಡ್ ವಿ.ಬಿ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಪಿಲಿಕುಳ ಉದ್ಯಾನವನದಲ್ಲಿ ಒಟ್ಟು 12 ಹುಲಿಗಳು ಇದ್ದು, ವಿಜಯಾ ಸಾವಿನಿಂದ ಹುಲಿಗಳ ಸಂಖ್ಯೆ 11ಕ್ಕೆ ಇಳಿಕೆಯಾಗಿದೆ.