ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ವಿಪಕ್ಷಗಳ ವಿರುದ್ದ ದೇವೇಂದ್ರ ಫಡ್ನವಿಸ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ ಎಂದು ವಿಪಕ್ಷಗಳಿಗೆ ಮಹಾರಾಷ್ಟ್ರ‌ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಶ್ನಿಸಿದ್ದಾರೆ.

ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ವಿಚಾರವಾಗಿ ಮಾತನಾಡಿದ ಅವರು, ಆರೋಪಿಯ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ದಾಳಿಯ ವೇಳೆ ಪೊಲೀಸರು ಚಪ್ಪಾಳೆ ತಟ್ಟುವುದಿಲ್ಲ. ಇಂತಹ ಘಟನೆಗಳ ವೈಭವೀಕರಣ ನಡೆಯಬಾರದು. ಪ್ರಕರಣ ಸಂಬಂಧ ನ್ಯಾಯಯುತ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ನಾವು ಎನ್‍ಕೌಂಟರ್ ಬೆಂಬಲಿಸುವುದಿಲ್ಲ. ಕಾನೂನಿನ ನಿಯಮವನ್ನು ಅನುಸರಿಸಬೇಕು ಮತ್ತು ಅದರ ಪ್ರಕಾರ ಅಪರಾಧಿಗೆ ಶಿಕ್ಷೆಯಾಗಬೇಕು. ಅದು ತ್ವರಿತವಾಗಿ ಆಗಬೇಕು ಎಂಬುದು ನನ್ನ ಅಭಿಪ್ರಾಯ. ನಮ್ಮ ಪೊಲೀಸರು ದಾಳಿ ಮಾಡಿದರೆ ಚಪ್ಪಾಳೆ ತಟ್ಟುವುದಿಲ್ಲ. ಅವರು ಆರೋಪಿಗಳ ಮೇಲೆ ಗುಂಡು ಹಾರಿಸುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ಆರೋಪಿ ಹತ್ಯೆ ಬಳಿಕ ಬ್ಯಾನರ್‍ಗಳನ್ನು ಹಾಕಿ ಸಂಭ್ರಮಿಸಿದ ವಿಚಾರಕ್ಕೆ, ಇದು ಸಂಪೂರ್ಣವಾಗಿ ತಪ್ಪು. ಇದು ಸಂಭವಿಸಬಾರದು. ಇಂತಹ ಘಟನೆಗಳ ವೈಭವೀಕರಣ ನಡೆಯಬಾರದು ಎಂದಿದ್ದಾರೆ.

ಬದ್ಲಾಪುರ ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅಕ್ಷಯ್ ಶಿಂಧೆ, ತಲೋಜಾ ಜೈಲಿನಿಂದ ಬದ್ಲಾಪುರಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಪಿಸ್ತೂಲ್ ಕಸಿದುಕೊಂಡು ಬೆಂಗಾವಲು ತಂಡದ ಮೇಲೆ ಗುಂಡು ಹಾರಿಸಿದ್ದ. ಬಳಿಕ ಪೊಲೀಸರ ಪ್ರತಿ ದಾಳಿಯಲ್ಲಿ ಹತ್ಯೆಗೀಡಾಗಿದ್ದ. ಆರೋಪಿ ಅಕ್ಷಯ್ ಪಾಂಡೆಯ ಎನ್‍ಕೌಂಟರ್ ಮೇಲೆ ವಿಪಕ್ಷ ಕಾಂಗ್ರೆಸ್ ಹಾಗೂ ಶಿವಸೇನೆ ಅನುಮಾನ ವ್ಯಕ್ತಪಡಿಸಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!