ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊರರಾಜ್ಯಗಳಿಂದ ಅಕ್ಕಿ ಖರೀದಿ ಅನ್ನೋ ವಿಷಯವೇ ಹಾಸ್ಯಾಸ್ಪದವಾಗಿದೆ, ಇದರ ಜೊತೆ ಕಮಿಷನ್ ಪಡೆಯೋ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು ಎಂದು ಶಾಸಕ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ತಾವು ಕೊಟ್ಟ ಭರವಸೆ, ಗ್ಯಾರಂಟಿ ಅನುಷ್ಠಾನ ಅಸಾಧ್ಯವಾದ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯುವುದು ಹಾಗೂ ಪಠ್ಯಪುಸ್ತಕ ಪರಿಷ್ಕರಣೆಯಂಥ ನಿರ್ಧಾರಗಳನ್ನು ಮಾಡುತ್ತಿದೆ. ಈ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಮುಂದಾಗಿದೆ. ಅಲ್ಲದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಟೀಕಿಸಿದರು.
ಸಂಪೂರ್ಣ ಬಹುಮತ ಇದೆ
ನಾವು ಹೇಗಾದರೂ ಆಡಳಿತ ಮಾಡುತ್ತೇವೆ ಎಂಬ ಧೋರಣೆಯನ್ನು ಬಿಜೆಪಿ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಯಡಿಯೂರಪ್ಪನವರು ತಾವೊಬ್ಬರೇ ಜನಪ್ರತಿನಿಧಿ ಇದ್ದಾಗಲೂ ವಿಧಾನಸಭೆ ಒಳಗೆ ಮತ್ತು ಹೊರಗಡೆ ರಾಜ್ಯಾದ್ಯಂತ ಹೋರಾಟಗಳನ್ನು ಸಂಘಟಿಸಿದ್ದರು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನಲಾಗುತ್ತಿತ್ತು, ನಾಯಕತ್ವ ಎಂದರೆ ಹಾಗಿರಬೇಕು ಎಂದು ಹೇಳಿದ್ದಾರೆ.
ಕ್ಷಮೆ ಕೇಳಿ
ಬಿಜೆಪಿ 66 ಶಾಸಕರೊಂದಿಗೆ ಬಲಿಷ್ಠ ವಿರೋಧ ಪಕ್ಷವಾಗಿದೆ. ನಿಮ್ಮ ಧೋರಣೆಯನ್ನು ಸಹಿಸಲಸಾಧ್ಯ. ನೀವು ಕೊಟ್ಟ ಭರವಸೆ ಈಡೇರಿಸಲೇಬೇಕು. ಇಲ್ಲವಾದರೆ ಜನರ ಕ್ಷಮೆ ಕೇಳಿ. ವಿದ್ಯುತ್ ದರ ಏರಿಸುವ ಕ್ರಮದಿಂದ ನಮ್ಮ ರಾಜ್ಯದ ಕೈಗಾರಿಕೆಗಳೆಲ್ಲ ಬೇರೆ ರಾಜ್ಯಗಳಿಗೆ ಹೋಗುವ ಸಂದರ್ಭ ಸೃಷ್ಟಿಯಾಗೋದಿಲ್ವೆ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.