ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನ ಯಾತ್ರಿಗಳು 18 ದಿನಗಳ ನಂತ್ರ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಈ ಸಾಧನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೊಂಡಾಡಿದ್ದು, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈ ದಿನ ಹೊಸ ಮೈಲಿಗಲ್ಲು ಸಾಧಿಸಿದೆ ಎಂದಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಯಶಸ್ವಿ ಬಾಹ್ಯಾಕಾಶ ಯಾತ್ರೆಯನ್ನು ಮುಗಿಸಿ, ಸುರಕ್ಷಿತವಾಗಿ ಭೂಮಿಗೆ ಮರಳಿದ ಶುಭಾಂಶು ಶುಕ್ಲಾ ಅವರನ್ನು ದೇಶವಾಸಿಗಳ ಪರವಾಗಿ ಸ್ವಾಗತಿಸುತ್ತೇನೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿನೀಡಿದ ಮೊದಲ ಭಾರತೀಯನೆಂಬ ದಾಖಲೆ ಬರೆದ ಅವರಿಗೆ ಅಭಿನಂದನೆಗಳು. ಇಡೀ ರಾಷ್ಟ್ರ ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡು ಹೆಮ್ಮೆಪಡುತ್ತಿದೆ ಎಂದಿದ್ದಾರೆ.
ಶುಭಾಂಶು ಶುಕ್ಲಾರವರು ತಮ್ಮ ಪರಿಶ್ರಮ ಮತ್ತು ಧೈರ್ಯದ ಮೂಲಕ ಕೋಟ್ಯಂತರ ಜನರ ಕನಸುಗಳಿಗೆ ರೆಕ್ಕೆಯಾಗಿದ್ದಾರೆ. ಅವರ ಈ ಬಾಹ್ಯಾಕಾಶ ಪಯಣವು ಭವಿಷ್ಯದ ಸಂಶೋಧನೆಗಳ ಹಾದಿಯನ್ನು ಸುಗಮವಾಗಿಸಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಈ ದಿನ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದ್ದಾರೆ.