ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದವರು ಬಂಡಾಯ ಎದ್ದಿದ್ದಾರೆ. ಹಾಗೆಯೆ ಚಾಮರಾಜ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಶಾಸಕ ವಾಸು ಮೈಸೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಸಿದ್ದರಾಮಯ್ಯನವರು ಟಿಕೆಟ್ ಸಿಗದಂತೆ ಮಾಡಿದ್ದಾರೆ. ನಾನು ನೇರವಾಗಿ ಮಾತನಾಡುತ್ತಿದ್ದೆ. ತಪ್ಪುಗಳನ್ನು ಪ್ರಶ್ನೆ ಮಾಡುತ್ತಿದ್ದೆ. ಕೆಲವು ವಿಚಾರಗಳನ್ನೂ ಖಂಡಿಸಿದ್ದೇನೆ. ಹೀಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ನಾನು ಸೋಲಲು ಸಿದ್ದರಾಮಯ್ಯನವರೇ ಕಾರಣ. ಆಗ ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇಲ್ಲಿ ಯಾವುದೇ ಮಾನದಂಡ ಬರಲಿಲ್ಲ. ಸಿದ್ದರಾಮಯ್ಯನವರ ಹಗೆತನಕ್ಕೆ ಅನೇಕರು ಬಲಿಯಾಗಿದ್ದಾರೆ. ನಾನು ಸೋತಿದ್ದೆ ನಿಜ, ಸಿದ್ದರಾಮಯ್ಯನವರು ಸಿಎಂ ಆಗಿಯೇ ಸೋತಿಲ್ಲವೇ? ಸಿಇಸಿ ಕಮಿಟಿಯಲ್ಲಿ ವೀರಪ್ಪ ಮೊಯ್ಲಿ ಒಬ್ಬರೇ ಇದ್ದರು. ಎಲ್ಲರೂ ನನ್ನ ಪರ ಕೆಲಸ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಎರಡು ಕಡೆ ಟಿಕೆಟ್ ಕೇಳಿರಲಿಲ್ಲವೇ? ಆಗ ಒಂದು ಕಡೆ ಟಿಕೆಟ್ ಕೈ ತಪ್ಪಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ:
ಸೋತಾಗಲೂ ನಾನು ಕುಗ್ಗಿಲ್ಲ. ನನಗಿದ್ದ ವಿಜನ್ ಈಡೇರಿಸಲು ಆಗಲಿಲ್ಲ ಅನ್ನುವ ಬೇಸರ ಇದೆ. ಹಲವು ದಿನಗಳಿಂದ ಟಿಕೆಟ್ ಬಗ್ಗೆ ವಾದ-ವಿವಾದಗಳು ನಡೆಯುತ್ತಾ ಇದ್ದವು. 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ದರೆ ನಾನು ನಿವೃತ್ತಿಗೂ ರೆಡಿ, ದಂಡ ಕಟ್ಟಲೂ ತಯಾರಿದ್ದೇನೆ. ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿ ಆಗಲಿ, ಸಾರ್ವಜನಿಕ, ಸರ್ಕಾರದ ಪ್ರಾಪರ್ಟಿಯನ್ನು ಅನಧಿಕೃತ ಮಾಡಿದ್ದರೆ ನಾನು ರಾಜೀನಾಮೆಗೆ ಸಿದ್ಧನಿದ್ದೇನೆ ಎಂದರು.