ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ಟೀಕಿಸುವ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿರುವ ಹೆಚ್ಡಿಕೆ, “ಧೈರ್ಯವಿದ್ದರೆ ನೀವೊಂದು ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಿ ಚುನಾವಣೆ ಎದುರಿಸಿ, ಆಗ ನಿಮ್ಮ ಶಕ್ತಿ ಏನೆಂದು ತಿಳಿಯಲಿದೆ” ಎಂದು ಗುಡುಗಿದ್ದಾರೆ.
ತಮ್ಮ ಕುಟುಂಬದ ಮೇಲಿನ ವಂಶಪಾರಂಪರ್ಯ ರಾಜಕಾರಣದ ಆರೋಪಕ್ಕೆ ಉತ್ತರಿಸಿದ ಕುಮಾರಸ್ವಾಮಿ, “ನಮ್ಮ ಕುಟುಂಬ ರಾಜಕೀಯಕ್ಕೆ ಬಂದಿದ್ದು ಜನರ ಪ್ರೀತಿ ಮತ್ತು ಬೆಂಬಲದಿಂದ. ಆದರೆ ಸಿದ್ದರಾಮಯ್ಯ ಅವರು ತಮ್ಮ ಮಗನನ್ನು ರಾಜಕೀಯಕ್ಕೆ ತಂದಿದ್ದು ರಾಜ್ಯದ ಅಭಿವೃದ್ಧಿಗಲ್ಲ, ಬದಲಾಗಿ ವಸೂಲಿಗಾಗಿ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ನ ಸಂಖ್ಯಾಬಲದ ಬಗ್ಗೆ ಲೇವಡಿ ಮಾಡಿದ ಅವರು, “ನಾವು 40 ಸ್ಥಾನ ಗೆದ್ದಿರುವುದು ನಮ್ಮ ಸ್ವಂತ ಶಕ್ತಿಯಿಂದ. 130-140 ಸೀಟು ಗೆದ್ದಿದ್ದೇವೆಂಬ ಅಹಂಕಾರ ಯಾರಿಗೂ ಶಾಶ್ವತವಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಅಲ್ಲಿ ಡಿಎಂಕೆ ನೀಡಿದ 28 ಸೀಟುಗಳಿಗೆ ಅಭ್ಯರ್ಥಿಗಳಿಲ್ಲದೆ, ಬೀದಿಯಲ್ಲಿ ಹೋಗುವವರನ್ನು ಕರೆತಂದು ನಿಲ್ಲಿಸಿದ್ದಾರೆ” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.



