ಹೊಸದಿಗಂತ ವರದಿ ವಿಜಯಪುರ:
ವೇಗವಾಗಿ ಬಂದ ಲಾರಿ ಹಿಂಬದಿ ಡಿಕ್ಕಿಯಾಗಿ, ಬೈಕ್, ಆಂಬ್ಯುಲೆನ್ಸ್, ಬೋರ್ ವೆಲ್ ವಾಹನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಆಂಬ್ಯುಲೆನ್ಸ್ ಚಾಲಕ ಸಾವಿಗೀಡಾದ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣ ಬಳಿ ನಡೆದಿದೆ.
ಬಿಎಸ್ಎಫ್ ಯೋಧ, ಮುದ್ದೇಬಿಹಾಳ ತಾಲೂಕು ಕಾಳಗಿ ತಾಂಡಾದ ನಿವಾಸಿ ಮೌನೇಶ ಖೂಬಪ್ಪ ರಾಠೋಡ (35) ಹುತಾತ್ಮರಾಗಿದ್ದು, ಕೇರಳ ಮೂಲದ ಆಂಬ್ಯುಲೆನ್ಸ್ ಚಾಲಕ ರಿತೀಶಕುಮಾರ (50) ಸಾವನ್ನಪ್ಪಿದ್ದಾನೆ.
ರಜೆ ಮೇಲೆ ಬಂದಿದ್ದ ಬಿಎಸ್ಎಫ್ ಯೋಧ ಮೌನೇಶ ರಾಠೋಡ ಅವರು ಮರಳಿ ಕರ್ತವ್ಯಕ್ಕೆ ತೆರಳಲು, ರೇಲ್ವೆ ಟಿಕೆಟ್ ಬುಕ್ ಮಾಡಿ, ಬೈಕ್ ನಲ್ಲಿ ತಾಂಡಾಕ್ಕೆ ಹೋಗುತ್ತಿದ್ದ ವೇಳೆ, ಗುಜರಾತ್ ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಲಾರಿ ಹಿಂಬದಿಯಿಂದ ಜೋರಾಗಿ ಬಂದು, ಬೈಕ್ ಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಯೋಧ ಸ್ಥಳದಲ್ಲಿ ಹುತಾತ್ಮರಾಗಿದ್ದಾರೆ. ಬಳಿಕ ಲಾರಿ, ಆಂಬ್ಯುಲೆನ್ಸ್ ಗೆ ಡಿಕ್ಕಿಯಾಗಿದೆ. ಆಂಬ್ಯುಲೆನ್ಸ್ ಮುಂದೆ ಇದ್ದ ಬೋರ್ ವೆಲ್ ವಾಹನಕ್ಕೆ ಡಿಕ್ಕಿಯಾಗಿದ್ದು, ಲಾರಿ ಹಾಗೂ ಬೋರ್ ವೆಲ್ ವಾಹನ ಮಧ್ಯೆ ಸಿಲುಕಿದ ಆಂಬ್ಯುಲೆನ್ಸ್ ನಜ್ಜುಗುಜ್ಜಾಗಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಚಿಕಿತ್ಸೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯೆ ಚಾಲಕ ಅಸುನೀಗಿದ್ದಾನೆ.
ಲಾರಿ ಬಳಿಕ ತಾಳಿಕೋಟೆ- ವಾಸ್ಕೋ ಬಸ್ ಗೆ ಡಿಕ್ಕಿಯಾಗಿದ್ದು, ಬಸ್ ನಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸರಣಿ ಅಪಘಾತಕ್ಕೆ ಲಾರಿ ಚಾಲಕನ ಅತೀ ವೇಗ, ನಿರ್ಲಕ್ಷವೇ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.