ರಾಚಪ್ಪಾಜಂಬಗಿ
ಕಲಬುರಗಿ: ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಪ್ರಧಾನಿ ಕಚೇರಿಯಿಂದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ದೇಶ್ಯಾದ್ಯಂತ 50 ಕೂಲಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ಈ ವರ್ಷ ಕಲಬುರಗಿ ಜಿಲ್ಲೆಯ ಇಬ್ಬರು ಕೂಲಿ ಕಾರ್ಮಿಕರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿರುವ ರಾಷ್ಟ್ರಧ್ವಜಾರೋಹಣ ಸಮಾರಂಭಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಿ ಬರುವಂತೆ ರಾಜ್ಯದ ನಾಲ್ವರಿಗೆ ಆಹ್ವಾನ ಬಂದಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯ ಇಬ್ಬರು ಕಾರ್ಮಿಕರು ಸೇರಿದ್ದಾರೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಾದ ಬಸಮ್ಮ ಭಗಂತರಾಯ ಪೂಜಾರಿ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾದ ತಾಲೂಕಿನ ನಂದೂರ ಕೆ. ಗ್ರಾಮದ ರೈತ ಆನಂದ ಬೆಳಗುಂಪಿ ಅವರಿಗೆ ಆಹ್ವಾನಿಸಲಾಗಿದೆ.
ಇನ್ನುಳಿದಂತೆ ಕೋಲಾರ ಜಿಲ್ಲೆಯ ಪೆದ್ದಪಲ್ಲಿ ಗ್ರಾಮದ ಕೂಲಿ ಕಾರ್ಮಿಕ ಮಲ್ಲಾರಪಳ್ಳಿ ಗಂಡ ಗಣೇಶನ್ ಹಾಗೂ ಮಂಡ್ಯ ಜಿಲ್ಲೆಯ ಎನ್. ವಿರೂಪಾಕ್ಷಮೂರ್ತಿ ಸೇರಿದಂತೆ ರಾಜ್ಯದ ನಾಲ್ವರು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹೊನ್ನಕಿರಣಗಿ ಗ್ರಾಮದ ಕೂಲಿ ಕಾರ್ಮಿಕರಾದ ಬಸಮ್ಮಾ ಪೂಜಾರಿ ಅವರು, ಪ್ರಧಾನಿ ಅವರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದ 20ಕ್ಕೂ ಅಧಿಕ ಕೂಲಿ ಕಾರ್ಮಿಕರು ಬಸಮ್ಮಾಳ ಜೊತೆಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಆ.11ಕ್ಕೆ ಕೆಕೆ ಎಕ್ಸ್ಪ್ರೆಸ್ ರೈಲಿನ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಮುಂಚಿತವಾಗಿ ಆಗ್ರಾದ ತಾಜ್ಮಹಲ್ ಹಾಗೂ ವೃಂದಾವನ ನೋಡಿಕೊಂಡು ನಂತರ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದೇವೆ ಎಂದು ನರೇಗಾ ಕ್ಷೇತ್ರ ಸಹಾಯಕ ಸದಾಶಿವ ಹೈದ್ರಾ ಹೊಸದಿಗಂತಕ್ಕೆ ಮಾಹಿತಿ ನೀಡಿದ್ದಾರೆ.
ಟಿವಿಗಳಲ್ಲಿ ಮಾತ್ರ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡುತ್ತಿದ್ದೆವು. ಆದರೆ, ಇದೀಗ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮೀಪದಿಂದ ನೋಡುವ ಅವಕಾಶ ದೊರಕಿರುವುದು ನನಗೆ ನಂಬಲು ಆಗುತ್ತಿಲ್ಲ. ನನ್ನ ಪಾಲಿಗೆ ಅದೃಷ್ಟವೆ ಎನ್ನಬಹುದು ಎಂದು ಬಸಮ್ಮಾ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾನು ಆಯ್ಕೆಯಾಗಿರುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದಾಗ ಆಶ್ಚರ್ಯವಾಯಿತು. ಪ್ರಧಾನಮಂತ್ರಿಗಳ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಜೀವನ ಸಾರ್ಥಕವಾಗಿದೆ ಎಂದು ಆನಂದ ಬೆಳಗುಂಪಿ ತಿಳಿಸಿದ್ದಾರೆ.