ಹೊಸದಿಗಂತ ವರದಿ, ರಾಯಚೂರು :
ಅಯ್ಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮದೇವರಿಗೆ ಪ್ರಾಣ ಪ್ರತಿಷ್ಠಾನದ ಅಂಗವಾಗಿ ಮಂತ್ರಾಲಯದ ಹೊರವಲಯದಲ್ಲಿರುವ ಶ್ರೀ ಅಭಯಾಂಜನೇಯ ದೇವಸ್ಥಾನದ ಎದುರುಗಡೆ ಸ್ಥಾಪಿಸಿರುವ ಶ್ರೀರಾಮನ ಮೂರ್ತಿಗೆ ಸೋಮವಾರ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ಸಲ್ಲಿಸಿದರು.
ಮಂತ್ರಾಲಯದ ಹೊರವಲಯದಲ್ಲಿ ಇತ್ತೀಚೆಗಷ್ಟೆ ಆರು ಎಕರೆ ಪ್ರದೇಶದಲ್ಲಿ ೩೬ ಅಡಿ ಎತ್ತರದ ಏಕಶಿಲಾ ಶ್ರೀರಾಮನ ಮೂರ್ತಿ ಸೇರಿ ೫೨ ಅಡಿಯ ಪೀಠದೊಂದಿಗೆ ಅನಾವರಣಗೊಳಿಸಲಾಗಿದ್ದು ಕ್ರೇನ್ ಮೂಲಕ ಪುಷ್ಪಾರ್ಚನೆ ನೆರವೇರಿಸಿದ ಶ್ರೀಪಾದಂಗಳವರು ಭೂಮಂಡಲದಲ್ಲಿನ ಎಲ್ಲ ಜನರಿಗೆ ಸುಖ ಶಾಂತಿಯನ್ನು ನೀಡಲಿ ಹಾಗೂ ಜನರ ಕಷ್ಟಕಾರ್ಪಣೆಯನ್ನು ಪರಿಹರಿಸಲಿ ಎಂದು ಪ್ರಾರ್ಥಿಸಿದರು.
ಇದಕ್ಕೂ ಪೂರ್ವದಲ್ಲಿ ಮಂತ್ರಾಲಯದ ಕ್ಷೇತ್ರದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆಗೆ ಶ್ರೀಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಚಾಲನೆ ನೀಡಿದರು. ಯೋಗಿಂದ್ರ ಮಂಟಪದಿAದ ಗ್ರಾಮದೇವತೆ ಶ್ರೀಮಂಚಾಲಮ್ಮದೇವಿ ಸನ್ನಿಧಿ ಮಾರ್ಗವಾಗಿ ಪಂಚಮುಖಿ ದರ್ಶನ, ವೆಂಕಟೇಶ್ವರಸ್ವಾಮಿ ಸನ್ನಿಧಾನ, ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯ, ಸಂಸ್ಕೃತ ವಿದ್ಯಾಪೀಠದ ಮಾರ್ಗವಾಗಿ ಸುಜೀಂದ್ರ ನಗರ, ನಾಗಲದಿನ್ನಿ ರಸ್ತೆ, ರಾಮಚಂದ್ರ ನಗರ, ಬಸ್ನಿಲ್ದಾಣ ಮಾರ್ಗವಾಗಿ ರಾಘವೇಂದ್ರಪುರ, ಸುಶಮೀಂದ್ರ ಪಾರ್ಕ್ವಾಗಿ ಮುಖ್ಯರಸ್ತೆ, ರಾಘವೇಂದ್ರ ವೃತ್ತ ಶ್ರೀಮಠದ ಮುಖ್ಯದ್ವಾರದಿಂದ ಶ್ರೀಮಠದವರೆಗೆ ವಿವಿಧ ವ್ಯಾದ್ಯಮೇಳಗಳೊಂದಿಗೆ ಶೋಭಾಯಾತ್ರೆ ನಡೆಯಸಲಾಯಿತು.
ಈ ಶೋಭಾಯಾತ್ರೆಯಲ್ಲಿ ಮಂತ್ರಾಲಯದ ಶ್ರೀಮಠದ ಶಾಲೆಯ ಮಕ್ಕಳು, ಶ್ರೀಮಠದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರಲ್ಲದೇ ಅನೇಕ ಭಾಗಗಳಿಂದಲೂ ಶ್ರೀರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.