ಹೊಸದಿಗಂತ ವರದಿ ಮಡಿಕೇರಿ:
ಮನುಷ್ಯನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸ್ಪೂರ್ತಿದಾಯಕವಾದುದು ಎಂದು ಅಂತರಾಷ್ಟ್ರೀಯ ಸ್ಕ್ವಾಷ್ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ಆದ್ಯತೆಗೆ ತಕ್ಕಂತೆ ವಿದ್ಯೆಯ ಜೊತೆಗೆ ಕ್ರೀಡೆಗೂ ಮಹತ್ವವನ್ನು ನೀಡುವಂತಾಗಬೇಕು. ಕ್ರೀಡೆಯ ಬಗ್ಗೆ ಮಕ್ಕಳಿಗೆ ಹೆಚ್ಚಿನ ಒಲವಿದ್ದರೆ ಅದನ್ನು ವಿದ್ಯೆ ಜೊತೆಗೆ ಪೋಷಿಸಿ ಪ್ರೋತ್ಸಾಹ ನೀಡಬೇಕು. ಕ್ರೀಡೆಯು ಜೀವನವನ್ನು ಉತ್ತಮ ರೀತಿಯಲ್ಲಿ ಜೀವಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕ್ರೀಡೆಯು ಜೀವನ, ಟೀಮ್ ವರ್ಕ್, ಸಮರ್ಪಣಾ ಭಾವ, ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಬೆಳೆಸುತ್ತದೆ. ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಕ್ರೀಡೆಯನ್ನು ಉಳಿಸಿ ಬೆಳೆಸಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.