ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರು, ಜನರಿಗೆ ಧೈರ್ಯ ತುಂಬಿದ್ದು, ಆತಂಕ ಪಡುವ ಅಗತ್ಯವಿಲ್ಲ. ಸರಾಸರಿ ಹೃದಯಾಘಾತದ ಪ್ರಕರಣಗಳು ಕಳೆದ ವರ್ಷದಷ್ಟೇ ಇದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ವಿಕಾಸಸೌಧದಲ್ಲಿ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಜನರು ಆತಂಕಪಡಬಾರದು. ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿವೆ ಎನ್ನುವ ಸುದ್ದಿ ಕೇಳಿ ಜಯದೇವ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮತ್ತು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ವಿಚಿತ್ರ ಸನ್ನಿವೇಶ ಎದುರಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಲಸಿಕೆಗೂ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ. ಹಾಸನ ಜಿಲ್ಲೆಯಲ್ಲಿ ಮಾತ್ರ ಪ್ರಕರಣ ಬೇರೆ ಅನ್ನೋದು ತಪ್ಪು. ಹೃದಯಾಘಾತದ ಆತಂಕ ಕೈಬಿಟ್ಟು ಉತ್ತಮ ಜೀವನಶೈಲಿ, ನಿದ್ರೆ ಮತ್ತು ದೈಹಿಕ ವ್ಯಾಯಾಮ ಮಾಡುವುದು ಅಗತ್ಯ. ಹೃದಯಾಘಾತದ ರೋಗ ಲಕ್ಷಣಗಳು ಇದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಸುಖಾಸುಮ್ಮನೆ ಹೋಗಬೇಡಿ ಎಂದು ಕಿವಿಮಾತು ಹೇಳಿದರು.
ಕೋವಿಡ್ ನಂತರದ ಜೀವನ ಶೈಲಿಯಿಂದ ಡಯಾಬಿಟಿಸ್, ಬಿಪಿ ಹೆಚ್ಚಾಗಿದೆ. ಆಹಾರ ಪದ್ಧತಿ ಬದಲಾಗಿದೆ, ಒತ್ತಡ ಜಾಸ್ತಿ ಆಗಿದೆ. ಈ ಮಧ್ಯೆ ಯುವಕರಲ್ಲಿ ಯಾಕೆ ಸಾವು ಆಗ್ತಿದೆ ಎಂದು ಅಧ್ಯಯನ ಮಾಡುತ್ತಿದ್ದೇವೆ. ಜನವರಿಯಲ್ಲಿ 178 ಜನರು ಅಡ್ಮಿಟ್ ಆಗಿದ್ದರು, 11 ಜನ ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ 181 ಜನರ ಪೈಕಿ 10 ಜನ, ಮಾರ್ಚ್ನಲ್ಲಿ 200 ಜನರಲ್ಲಿ 9 ಜನ ಹಾಗೂ ಬೆಂಗಳೂರಲ್ಲಿ 2,165ರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಪೈಕಿ 101 ಜನ ಮೃತಪಟ್ಟಿದ್ದಾರೆ. ವರ್ಷಕ್ಕೆ ಒಂದು ಬಾರಿ ಹೃದಯ ತಪಾಸಣೆ ಮಾಡಿಸಿದರೆ ಸಾಕು. ಆತಂಕದಿಂದ ಆಸ್ಪತ್ರೆಗೆ ಹೋಗೋದು ಬೇಡ ಎಂದು ಮಾಹಿತಿ ನೀಡಿದರು.