ಹೊಸದಿಗಂತ ವರದಿ, ಬಂಟ್ವಾಳ:
ಬಂಟ್ವಾಳ ಸಮೀಪದ ರಾಯಿ ಎಂಬಲ್ಲಿ ಮೆಸ್ಕಾಂನ ಮೀಟರ್ ರೀಡರ್ ವೊಬ್ಬರ ಮೇಲೆ ಬೀದಿ ನಾಯಿದಾಳಿ ನಡೆಸಿರುವ ಘಟನೆ ಮಾಸುವ ಮುನ್ನವೇ ಅಂಗನವಾಡಿ ಮಗವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ತಾಲೂಕಿನ ಬೋಳಂತೂರಿನಲ್ಲಿ ಗುರುವಾರ ನಡೆದಿದೆ.
ಅಂಗನವಾಡಿಕೇಂದ್ರಕ್ಕೆ ತೆರಳುತ್ತಿದ್ದ ಬೋಳಂತೂರು ನಾರ್ಶ ಬಂಗಾರಕೋಡಿಯಲ್ಲಿ ಆರರ ಹರೆಯದ ಪುಟ್ಟ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿದೆ.
ಮನೆಯ ಸಮೀಪವಿರುವ ಅಂಗನವಾಡಿ ಕೇಂದ್ರಕ್ಕೆ ಬೆಳಿಗ್ಗೆ ಮಗು ಏಕಾಂಗಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ.ಪರಿಣಾಮ ಮಗುವಿನ ದೇಹದ ಮೇಲೆ ಗಾಯಗೊಂಡಿದೆ.
ಮಗುವಿನ ಚೀರಾಟ ಕೇಳಿ ಸ್ಥಳೀಯ ಮನೆಯವರು ಬಂದು ನಾಯಿಯಿಂದ ಮಗುವನ್ನು ರಕ್ಷಿಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಒಂದೇ ವಾರದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಬೀದಿ ನಾಯಿ ದಾಳಿಯ ಎರಡನೇ ಪ್ರಕರಣ ಇದಾಗಿದೆ. ಬೀದಿ ನಾಯಿಗಳ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳ ದಿರುವುದರಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಲೆ ಇದೆ.
ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರ ಪ್ರದೇಶದಲ್ಲು ಬೀದಿ ನಾಯಿಗಳ ಉಪಟಳ ಅತೀಯಾಗಿದೆ.ವಿಚಿತ್ರವೆಂದರೆ ಬಿ.ಸಿ.ರೋಡಿನ ಆಡಳಿತಸೌಧದ ಮುಂಭಾಗದಲ್ಲೇ ಬೀದಿ ನಾಯಿಗಳು ಬೀಡುಬಿಟ್ಟಿವೆ.ಬಂಟ್ವಾಳ ನಗರದಲ್ಲಂತು ದ್ವಿಚಕ್ರ,ಕಾರುಗಳನ್ನು ಬೆನ್ನಟ್ಟಿ ಆತಂಕವನ್ನು ಸೃಷ್ಠಿಸುವ ಬೀದಿ ನಾಯಿಗಳ ಹಾವಳಿಗೆ ಪುರಸಭೆಯಿಂದ ಇನ್ನು ಕಡಿವಾಣ ಹಾಕಲು ಸಾಧ್ಯವಾಗಿಲ್ಲ.



