ಹೊಸದಿಗಂತ ವರದಿ, ಮಂಗಳೂರು:
ಸದನದ ಬಾವಿಯನ್ನು ದಾಟಿ ಸ್ಪೀಕರ್ ಪೀಠಕ್ಕೇರಿ ರಾಜ್ಯದ ಘನತೆಗೆ ಕಪ್ಪುಚುಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗೆ ದುಂಡಾವರ್ತನೆ ತೋರುವ ಶಾಸಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೇರಿ ದುಂಡಾವರ್ತನೆ ತೋರಿದ್ದ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿರುವುದನ್ನು ಶಾಸಕರು ಶಿಕ್ಷೆ ಎಂದು ಭಾವಿಸುವುದು ಬೇಡ. ಅವತ್ತು ನಡೆದ ಘಟನೆ ರಾಜ್ಯದ ಜನತೆಗೆ ಅಸಹ್ಯ ಮೂಡಿಸಿದೆ. ಶಾಸಕರು ತಮ್ಮ ವರ್ತನೆಯನ್ನು ತಿದ್ದಿ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮತ್ತೆ ಇಂತಹ ವರ್ತನೆ ಮುಂದುವರಿಸಿದರೆ ಒಂದು ವರ್ಷ ಅಮಾನತು ಅಥವಾ ಕಾಯ್ದೆಯಡಿ ಲಭ್ಯವಿರುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಸದನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಇದೆಯಾದರೂ ಅದಕ್ಕೆ ರೀತಿ ನೀತಿ ಇದೆ. ? ಇಂಥ ವರ್ತನೆಗಳಿಗೆ ಫುಲ್ಸ್ಟಾಪ್ ಹಾಕಬೇಕಿದೆ. ಇಂತಹ ವರ್ತನೆಯನ್ನು ಯು.ಟಿ. ಖಾದರ್ ಕ್ಷಮಿಸಬಹುದು, ಆದರೆ ಸಂವಿಧಾನಾತ್ಮಕ ಪೀಠ ಸಹಿಸಲಾಗದು ಎಂದವರು ಹೇಳಿದರು.
ಹಿಂದೆ ಇಂತಹ ವರ್ತನೆ ತೋರಿಸಿದರೆ ಒಂದು ದಿನದ ಮಟ್ಟಿಗೆ ಅಥವಾ ಸದನ ಮುಗಿಯುವವರೆಗೆ ಅಮಾನತು ಮಾಡಲಾಗುತ್ತಿತ್ತು. ಆದರೆ ತಪ್ಪು ಮಾಡಿದವರಿಗೆ ತಪ್ಪಿನ ಅರಿವಾಗಬೇಕು. ಟಿವಿಯಲ್ಲಿ ತಮ್ಮದೇ ವರ್ತನೆಯನ್ನು ಮತ್ತೊಮ್ಮೆ ನೋಡಲಿ, ತಪ್ಪನ್ನು ತಿದ್ದಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.