ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಬೇಕಾದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಹೊರರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಬಳ್ಳಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇಂಡಸ್ಟ್ರೀಸ್ ಪ್ರದೇಶದ ಗೋಡೌನ್ ಒಂದರಲ್ಲಿ 3,575 ಚೀಲಗಳನ್ನು ರಾಶಿ ಹಾಕಲಾಗಿದ್ದುದನ್ನು ದಾಳಿ ನಡೆಸಿ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:
ಮಾಹಿತಿ ಪ್ರಕಾರ, ಸಬ್ಸಿಡಿ ಯೂರಿಯಾವನ್ನು ಚೀಲ ಬದಲಾಯಿಸಿ ಕೈಗಾರಿಕಾ ಬಳಕೆಯ “ಟೆಕ್ನಿಕಲ್ ಗ್ರೇಡ್” ಎಂದು ಲೇಬಲ್ ಅಂಟಿಸಿ ಕಾರ್ಖಾನೆಗಳಿಗೆ ಹಾಗೂ ಕೇರಳ ಸೇರಿ ಹೊರರಾಜ್ಯಗಳಿಗೆ ರವಾನೆ ಮಾಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಕೇರಳ ಮೂಲದ ವಿಪಿನ್ ಅಲಿಯಾಸ್ ಕಾರ್ತಿಕ್ ಸಿಂಗ್ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ರಸಗೊಬ್ಬರ ವ್ಯಾಪಾರಿಗಳೂ ಸೇರಿದ್ದಾರೆ.
ಬಿತ್ತನೆ ಕಾಲದಲ್ಲಿ ಯೂರಿಯಾ ಅಭಾವ ಉಂಟಾಗಿ ರೈತರು ಸಂಕಷ್ಟ ಅನುಭವಿಸಿದ್ದ ಹಿನ್ನೆಲೆ ಈ ದಂಧೆ ಬೆಳಕಿಗೆ ಬಂದಿದೆ. ಕೃಷಿ ಇಲಾಖೆಯ ಕೆಲವರ ಪಾತ್ರವಿದ್ದೇನಾ ಎಂಬ ಅನುಮಾನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



