ಹೊಸದಿಗಂತ ವರದಿ, ಹಾವೇರಿ :
ಆದಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಗೀತ ಪಾಠಶಾಲೆಗೆ ಅನುದಾನ ಮಂಜೂರಾತಿ ಮಾಡಿದ್ದು, ಆದಷ್ಟು ಬೇಗನೆ ಬಿಡುಗಡೆ ಮಾಡಿ ಗೋಶಾಲೆಗಳಿಗೆ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಭಾನುವಾರ ಅವರು ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಆದಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ ಮತ್ತು ಯೋಗ ಪಾಠಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಠದ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಮಕ್ಕಳಿಗೆ ವೇದ, ಆಗಮ ಕಲಿಸುವ ಮೂಲಕ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು, ಆಧ್ಯಾತ್ಮಿಕ ಚಿಂತನೆಯನ್ನು ಮುಂದಿನ ಜನಾಂಗಕ್ಕೆ ಮಠ ಕಲಿಸುತ್ತಿದೆ ಎಂದು ತಿಳಿಸಿದರು.
ಆದಿ ಜಗದ್ಗುರು ರೇಣುರಾಚಾರ್ಯರು ಸ್ಥಾಪಿಸಿದ ಪಂಚಪೀಠಗಳು ನಾಡಿನ ಕಲ್ಯಾಣಕ್ಕಾಗಿ ಅಭೂತಪೂರ್ವ ಕೆಲಸ ಮಾಡುತ್ತಿವೆ. ವೀರಶೈವರ ಸಮಗ್ರ ಅಭಿವೃದ್ಧಿಗಾಗಿ ಅವರ ಚಿಂತನೆ ಹಾಗೂ ಪಯಣ, ಆಶೀರ್ವಾದ ಸಮುದಾಯದ ಮೇಲೆ ಸದಾ ಕಾಲ ಇರಲಿ ಎಂದರು.
>> ಜಂಗಮವಾಡಿ ಮಠ ಉತ್ತಮವಾಗಿ ಬೆಳೆದಿದೆ.
ಕಾಶಿ ಜಗದ್ಗುರುಗಳು ಮೇಧಾವಿಗಳು, ಜ್ಞಾನ ಭಂಡಾರವಾಗಿದ್ದರೂ ತೋರಿಸಿಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಮಠದ ಶ್ರೇಯೋಭಿವೃದ್ಧಿಗೆ ಮೊದಲಿನಿಂದಲೂ ತೊಡಗಿಸಿಕೊಂಡಿದ್ದು ಕಾಶಿಯಲ್ಲಿನ ಜಂಗಮವಾಡಿ ಮಠ ಉತ್ತಮವಾಗಿ ಬೆಳೆದಿದೆ ಎಂದರು.
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶಿವರಾಂ ಹೆಬ್ಬಾರ್, ಶಂಕರ ಪಾಟೀಲ ಮುನೇನಕೊಪ್ಪ ಮತ್ತಿತರರಿದ್ದರು.