ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ವ್ಯಕ್ತಿಯ ವಿಚಾರಣೆ ನಡೆಸದೆ ಅಥವಾ ನ್ಯಾಯಾಲಯದ ಸೂಚನೆ ಇಲ್ಲದೆಯೇ ಬಂಧನದ ಅವಧಿಯನ್ನು ವಿಸ್ತರಿಸುವುದು ಅಕ್ಷಮ್ಯ. ಇದು ಆತನ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಆದ್ದರಿಂದ ಸೂಚಿಸಲಾದ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ಅಭಿಪ್ರಾಯಗಳನ್ನು ಕೇಳದೇ ಎರಡು ಬಾರಿ ಬಂಧನದ ಅವಧಿ ವಿಸ್ತರಿಸಿದ್ದ ಪೊಲೀಸ್ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಪ್ರಕಾಶ್ ಚಂದ್ರ ಯಾದವ್ ಅಲಿಯಾಸ್ ಮುಂಗೇರಿ ಯಾದವ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಜಾರ್ಖಂಡ್ನ ಅಪರಾಧ ನಿಯಂತ್ರಣ ಕಾಯ್ದೆಯಡಿ ‘ಸಮಾಜ ಘಾತುಕ ವ್ಯಕ್ತಿ’ ಎಂಬ ಆರೋಪದ ಮೇಲೆ ಯಾದವ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ‘ಸುಪ್ರೀಂ’ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠವು, ‘ಸಲಹಾ ಮಂಡಳಿ ಮುಂದೆ ಹಾಜರುಪಡಿಸದೆ ಯಾವುದೇ ವ್ಯಕ್ತಿಯ ಬಂಧನದ ಅವಧಿಯನ್ನು ವಿಸ್ತರಿಸುವಂತಿಲ್ಲ. ಜೊತೆಗೆ ಮೂರು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಇರಿಸುವಂತಿಲ್ಲ. ಇದು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ರಚಿಸಿರುವ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಲಿದೆ’ ಎಂದು ಹೇಳಿದೆ.