ಹೊಸದಿಗಂತ ಬೀದರ್:
ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ೪.೬೬ ಲಕ್ಷ ರೂಪಾಯಿ ಕಳೆದುಕೊಂಡ ಶಿಕ್ಷಕ.
ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಗೆ ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸಿದ ಅಪರಿಚಿತ ವ್ಯಕ್ತಿಯೊಬ್ಬರು, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ಹಂತ-ಹಂತವಾಗಿ ಬರೋಬ್ಬರಿ ₹4.66 ಲಕ್ಷ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಮನಾಬಾದ್ ಪಟ್ಟಣದ ಮಾಣಿಕ ಪ್ರಭು ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹರಿಯಾಣ ಮೂಲದ ಸಂಗೀತ ಭಾರದ್ವಾಜ ಹಣ ಕಳೆದುಕೊಂಡವರು. ಈ ಕುರಿತು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ರ ಜನವರಿ 14ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ʼನಿಮಗೆ ಸಿಂಗಾಪುರದಲ್ಲಿ ಡೈರೆಕ್ಟರ್ ಡಿಪಾರ್ಟಮೆಂಟ್ ಏಜುಕೇಶನ್ ಪ್ರೋಗ್ರಾಮ್ ಹುದ್ದೆಯಿದ್ದು, ನೀವು ಇಚ್ಚಿಸಿದರೆ ನಿಮ್ಮ ಇಮೇಲ್ಗೆ ಮಾಹಿತಿ ಕಳಿಸುತ್ತೇವೆʼ ಎಂದು ಹೇಳಿ, ಶಿಕ್ಷಕನ ಇಮೇಲ್ಗೆ ಹುದ್ದೆಯ ದಾಖಲಾತಿ, ವೇತನ ಹಾಗೂ ರಜಿಸ್ಟ್ರರೇಶನ್ ಕಳುಹಿಸಿದ್ದಾರೆ. ವಿದೇಶದಲ್ಲಿ ಕೆಲಸ ಸಿಕ್ಕಿತೆಂಬ ಖುಷಿಯಲ್ಲಿ ನಂಬಿದ ಶಿಕ್ಷಕ ಇಮೇಲ್ಗೆ ಬಂದ ಲಿಂಕ್ ಮೂಲಕ ಜ.15ರಂದು ₹5 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.