ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಸೀರಿಯಲ್ ನಟ ಮನೋಜ್ ಕುಮಾರ್ (Manoj Kumar) ತನ್ನ ಗೆಳತಿಯ ಮಾಜಿ ಪತಿಯ ಮೇಲೆ ಗುಂಡು ಹಾರಿಸಿದ್ದು ಗಾಯಗೊಂಡತನನ್ನು ಆಸ್ಪತ್ರೆಗೆ
ದಾಖಲಿಸಲಾಗಿದೆ.
ಹೈದರಾಬಾದ್ (Hyderabad) ಪೊಲೀಸರು ಪ್ರಸ್ತುತ ಮನೋಜ್ ಕುಮಾರ್ಗಾಗಿ ಹುಡುಕಾಟ ನಡೆಸಿದ್ದು ಆತ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಹೈದರಾಬಾದ್ನ ಶಮೀರ್ಪೇಟ್ನಲ್ಲಿ ಸಿದ್ಧಾರ್ಥ್ ದಾಸ್ ಎಂಬಾತ, ಸೆಲೆಬ್ರಿಟಿ ಕ್ಲಬ್ ವಿಲ್ಲಾಗೆ ತನ್ನ ಮಾಜಿ ಪತ್ನಿ ಹಾಗೂ ಮಕ್ಕಳನ್ನು ನೋಡಲು ಬಂದಿದ್ದಾನೆ. ಆ ಸಮಯದಲ್ಲಿ ಆಕೆಯೊಟ್ಟಿಗೆ ಮನೋಜ್ ಕುಮಾರ್ ಇದ್ದುದ್ದನ್ನು ಕಂಡಿದ್ದಾನೆ. ಇಬ್ಬರಿಗೂ ಜಗಳವಾಗಿದೆ. ಜಗಳ ತಾರಕಕ್ಕೆ ಹೋಗಿ ನಟ ಮನೋಜ್ ಕುಮಾರ್ ತನ್ನ ಏರ್ಗನ್ನಿಂದ ಸಿದ್ಧಾರ್ಥ್ ದಾಸ್ಗೆ ಗುಂಡಿಟ್ಟಿದ್ದಾನೆ. ಗಾಯಗೊಂಡ ಸಿದ್ಧಾರ್ಥ್ ದಾಸ್ ಹೇಗೋ ತಪ್ಪಿಸಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿ, ಪೊಲೀಸರಿಗೆ ವಿಷಯ ತಲುಪಿಸಿದ್ದಾನೆ.
ಘಟನೆ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಸಂದೀಪ್ ಕುಮಾರ್, 2019 ರಲ್ಲಿ ಸಿದ್ಧಾರ್ಥ್ ದಾಸ್ ತಮ್ಮ ಪತ್ನಿ ಸುಶ್ಮಿತಾಯಿಂದ ದೂರಾಗಿದ್ದರು. ಅವರಿಗೆ ಒಂದು ಹೆಣ್ಣು ಒಂದು ಗಂಡು ಮಗುವಿತ್ತು. ಸಿದ್ಧಾರ್ಥ್ ದಾಸ್ ಮಾಜಿ ಪತ್ನಿ ಶಮೀರ್ಪೇಟ್ನ ಸೆಲೆಬ್ರಿಟಿ ಕ್ಲಬ್ ಹೌಸ್ನ ವಿಲ್ಲಾ ನಂಬರ್ 21ರಲ್ಲಿ ವಾಸವಿದ್ದರು. ಸಿದ್ಧಾರ್ಥ್ ತಮ್ಮ ಮಕ್ಕಳನ್ನು ನೋಡಲು ಬಂದಾಗ ಅಲ್ಲಿಯೇ ಒಟ್ಟಿಗಿದ್ದ ಮನೋಜ್ ಹಾಗೂ ಸುಶ್ಮಿತಾ ಜೊತೆ ಜಗಳವಾಡಿದರು. ಮನೋಜ್, ತಮ್ಮ ಏರ್ಗನ್ನಿಂದ ಸಿದ್ಧಾರ್ಥ್ ಮೇಲೆ ಗುಂಡು ಹಾರಿಸಿದ್ದಾನೆ.
ಇತ್ತ ಸಿದ್ಧಾರ್ಥ್ರ ಮಕ್ಕಳು ಸಹ ನಟ ಮನೋಜ್ ಕುಮಾರ್ ವಿರುದ್ಧ ಮಕ್ಕಳ ಕಲ್ಯಾಣ ಇಲಾಖೆಗೆ ಮೌಖಿಕ ದೂರು ನೀಡಿದ್ದು, ಮನೋಜ್ ಕುಮಾರ್ ತಮ್ಮನ್ನು ಹೊಡೆಯುತ್ತಿದ್ದನೆಂದು, ಬೈಯುತ್ತಿದ್ದನೆಂದು ಹೇಳಿದ್ದಾರೆ. ತಾವು, ತಾಯಿಯೊಂದಿಗೆ ಅಥವಾ ತಾಯಿಯ ಸಂಬಂಧಿಗಳೊಂದಿಗೆ ಇರಲು ಇಚ್ಛಿಸುವುದಿಲ್ಲ”ಎಂದಿದ್ದಾರೆ. ಮಕ್ಕಳ ಕಲ್ಯಾಣ ಇಲಾಖೆಯು ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿದ್ದು ಅವರ ತಂದೆಯಾದ ಸಿದ್ಧಾರ್ಥ್ ದಾಸ್ ವಶಕ್ಕೆ ನೀಡುವ ಬಗ್ಗೆ ಚಿಂತಿಸುತ್ತಿದೆ.
ತೆಲುಗು ಟಿವಿಯ ಜನಪ್ರಿಯ ಧಾರಾವಾಹಿಯಾದ ‘ಕಾರ್ತಿಕ ದೀಪಂ’ ನಲ್ಲಿ ಮನೋಜ್ ಕುಮಾರ್ ನಟಿಸಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲಿಯೂ ಮನೋಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.