ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂದೂರ ನಂತರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಯೋತ್ಪಾದನೆ ವಿರುದ್ಧ ಉಗ್ರ ಹಾಗೂ ತೀವ್ರ ವಾದ ಮಂಡಿಸಿದ್ದು, ಇದು ಕೇವಲ ಭಾರತ–ಪಾಕಿಸ್ತಾನದ ನಡುವಿನ ಸಮಸ್ಯೆ ಅಲ್ಲ, ಜಗತ್ತಿನೆಲ್ಲರಿಗೂ ಸಂಬಂಧಪಟ್ಟ ವಿಷಯ ಎಂದು ಹೇಳಿದ್ದಾರೆ.
ಯುರೋಪಿನ ಮಾಧ್ಯಮದ ಜೊತೆ ಮಾತನಾಡಿದ ಜೈಶಂಕರ್, “ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಸೈನಿಕ ಪಟ್ಟಣದ ಮಧ್ಯದಲ್ಲಿ ವರ್ಷಗಟ್ಟಲೆ ಸುಲಭವಾಗಿ ವಾಸಿಸುತ್ತಿದ್ದ. ಈ ಸತ್ಯವನ್ನು ಇಡೀ ಜಗತ್ತು ಅರಿಯಬೇಕು,” ಎಂದು ಹೇಳಿದರು. ಪಾಕಿಸ್ತಾನವು ಸ್ವಾತಂತ್ರ್ಯಾನಂತರವೇ ಭಾರತದ ಗಡಿಗಳನ್ನು ಉಲ್ಲಂಘಿಸಿರುವ ಬಗ್ಗೆ ಅವರು ನೆನಪಿಸಿದರು.
“ಪಶ್ಚಿಮದ ಹಲವು ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ಈಗ ಅವರು ಅಂತಾರಾಷ್ಟ್ರೀಯ ತತ್ವಗಳ ಬಗ್ಗೆ ಉಪದೇಶ ನೀಡುತ್ತಿದ್ದಾರೆ,” ಎಂದು ಜೈಶಂಕರ್ ಕಿಡಿಕಾರಿದರು.
ಉಕ್ರೇನ್-ರಷ್ಯಾ ಯುದ್ಧದ ಕುರಿತು ಪ್ರತಿಕ್ರಿಯಿಸಿದ ಅವರು, “ಯುದ್ಧದ ಮೂಲಕ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ. ನಾವು ಭಾಗಿಯಾಗುವುದಿಲ್ಲ ಮತ್ತು ಪರಿಹಾರ ಸೂಚಿಸುವುದು ನಮ್ಮ ಉದ್ದೇಶವೂ ಅಲ್ಲ,” ಎಂದು ಸ್ಪಷ್ಟಪಡಿಸಿದರು.