ಹೊಸದಿಗಂತ ಡಿಜಿಟಲ್ ಡೆಸ್ಕ್;
ದೇಶವೇ ಸ್ವಾತಂತ್ರ್ಯದ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, . ಅದೇ ಸಮಯದಲ್ಲಿ, ಭಯೋತ್ಪಾದಕರು ಮತ್ತು ಅವರ ಸಂಘಟನೆಗಳು ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತವೆ. ಇದೀಗ ಪೊಲೀಸರು ಭಯೋತ್ಪಾದನೆಯ ಸಂಚನ್ನು ವಿಫಲಗೊಳಿಸಿದ್ದು, ಮೋಸ್ಟ್ ವಾಂಟೆಡ್ ಉಗ್ರನನ್ನು ಬಂಧಿಸಿದ್ದಾರೆ.
ದೆಹಲಿಯ ದರಿಯಾಗಂಜ್ ನಿವಾಸಿ ರಿಜ್ವಾನ್ ಅಬ್ದುಲ್ ಹಾಜಿ ಅಲಿ ಐಎಸ್ಐಎಸ್ ಪುಣೆ ವಲಯದ ಪ್ರಮುಖ ಸದಸ್ಯನಾಗಿದ್ದನು. ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ರಿಜ್ವಾನ್ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಆತನ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಣ್ಣಿಟ್ಟಿತ್ತು. ಅಲ್ಲದೆ, ಈಗಾಗಲೇ ಆತನ ಮೇಲೆ ರೂ.3 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಗುರುವಾರ ರಾತ್ರಿ ದೆಹಲಿಯ ತುಘಲಕಾಬಾದ್ನಲ್ಲಿರುವ ಜೀವವೈವಿಧ್ಯ ಉದ್ಯಾನವನಕ್ಕೆ ರಿಜ್ವಾನ್ ಬರಲಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ವಿಶೇಷ ಪೊಲೀಸ್ ತಂಡ ಅತ್ಯಂತ ಚಾಕಚಕ್ಯತೆಯಿಂದ ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಬಂಧಿತ ರಿಜ್ವಾನ್ನಿಂದ ಪಿಸ್ತೂಲ್ ಹಾಗೂ ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಎರಡು ಫೋನ್ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ.
ಸ್ವಾತಂತ್ರ್ಯೋತ್ಸವ ಸಂಭ್ರಮದ ಹೊಸ್ತಿಲಲ್ಲೇ ರಿಜ್ವಾನ್ ದೆಹಲಿಗೆ ಆಗಮಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ದೆಹಲಿಯ ಹಲವು ವಿಐಪಿ ಪ್ರದೇಶಗಳಲ್ಲಿ ರಿಜ್ವಾನ್ ಮತ್ತು ಅವರ ಅನುಯಾಯಿಗಳು ಈಗಾಗಲೇ ಓಡಾಡಿದ್ದಾರೆ. ಆಗಸ್ಟ್ ಹದಿನೈದನೇ ತಾರೀಖಿನಂದು ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯ ರಿಜ್ವಾನ್ ಬಂಧನದ ನಂತರ ದೆಹಲಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಲ್ಲದೆ, ಆಗಸ್ಟ್ 15 ರಂದು ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳಿಂದ ಪೊಲೀಸ್ ಅಧಿಕಾರಿಗಳಿಗೆ ಪ್ರಮುಖ ಆದೇಶಗಳನ್ನು ನೀಡಲಾಗಿದೆ.