ಹೊಸ ದಿಗಂತ ವರದಿ, ಬೀದರ್:
ಕರ್ನಾಟಕದಲ್ಲಿ ಕನ್ನಡವೇ ತಾಯಿ, ಆದರೆ ಸರ್ಕಾರದ ಕಾರ್ಯವೈಖರಿಯಿಂದ ಮಲತಾಯಿ ಧೋರಣೆ ಆಗಿರುವುದು ದುರ್ದೈವದ ಸಂಗತಿ, ಬೆಂಗಳೂರಿನಲ್ಲಿ ಐ.ಟಿ.ಬಿ.ಟಿ. ಕಂಪನಿಗಳು ಹೊರನಾಡಿನಿಂದ ಬಂದ ವ್ಯಾಪರಿಗಳು ಬೇರೆ ಭಾಷೆಯ ನಾಮಫಲಕಗಳು ರಾರಾಜಿಸುತ್ತಿರುವಾಗ ಕರ್ನಾಟಕ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಿಗಳು ಕುಂಭಕರಣ ನಿದ್ರೆಗೆ ಜಾರಿದ್ದರಿಂದ ಕನ್ನಡಪರ ಸಂಘಟನೆಗಳು ಜಾಗೃತರಾಗಿ ಅನ್ಯಭಾಷಿಯ ನಾಮಫಲಕಗಳು ಕಿತ್ತು ಹಾಕಿರುವುದು ಹೆಮ್ಮೆಯ ಸಂಗತಿ. ಆದರೆ ಕರ್ನಾಟಕ ಸರ್ಕಾರ ಅವರನ್ನು ಬಂಧಿಸಿ, ಜೈಲಿಗೆ ಹಾಕಿರುವುದು ಬ್ರಿಟೀಷರು ಸ್ವತಂತ್ರ ಸೈನಾನಿಗಳ ಮೇಲೆ ದಬ್ಬಾಳಿಕೆ ಮಾಡಿದಂತಾಗಿದೆ. ಇದು ಕರ್ನಾಟಕ ಸರ್ಕಾರವೇ, ಕನ್ನಡ ವಿರೋಧಿ ಸರ್ಕಾರವೇ ತಿಳಿಯದಾಗಿದೆ?
ಬೆಂಗಳೂರಿನಲ್ಲಿ ಅಷ್ಟೇ ಅನ್ಯ ಭಾಷೆಯ ನಾಮಫಲಕಗಳಿಲ್ಲ, ನಮ್ಮ ಬೀದರ ಜಿಲ್ಲೆಯಲ್ಲಿಯೂ ಸಹ ಕನ್ನಡಕ್ಕೆ ನಿರ್ಲಕ್ಷಿಸಲಾಗಿದೆ. ಎರಡು ತಿಂಗಳೊಳಗೆ ಈ ಎಲ್ಲಾ ನಾಮಫಲಕಗಳಲ್ಲಿ ಕನ್ನಡ ಮೇಲೆ ರಾರಾಜಿಸಬೇಕು. ಇಲ್ಲವಾದಲ್ಲಿ ಬೀದರ ಜಿಲ್ಲೆಯಲ್ಲಿ ಬೀದಿ ಹೋರಾಟಕ್ಕೆ ಇಳಿಯಲು ಸರ್ಕಾರ ಮತ್ತು ಜಿಲ್ಲಾ ಆಡಳಿತವೇ ಅವಕಾಶ ಕಲ್ಪಿಸಿದಂತಾಗುತ್ತದೆ ಮತ್ತು ಬೆಂಗಳೂರಿನಲ್ಲಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಶೀಘ್ರ ಬಿಡುಗಡೆಗೊಳಿಸಬೇಕು, ಇಲ್ಲವಾದಲ್ಲಿ ಸರ್ಕಾರದ ಕ್ರಮ ಖಂಡಿಸಿ ಹೋರಾಡಬೇಕಾಗುತ್ತದೆ ಎಂದು ಎಚ್ಚರಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಆನಂತರೆಡ್ಡಿ ಟಿ ಮಿರ್ಜಾಪೂರ, ಪ್ರಧಾನ ಕಾರ್ಯದರ್ಶಿ ಬಕ್ಕಪ್ಪಾ ನಾಗೂರಾ, ಕಾರ್ಯದರ್ಶಿ ವಿದ್ಯಾಸಾಗರ, ವಿಶ್ವನಾಥ ಉಪ್ಪೆ, ರಮೇಶ ಬಿರಾಧಾರ, ಅನಿಲ್ ಕುಮಾರ್ , ಅಟಂಗೆ ಶಿವಾಜಿ ದದ್ದಾಪುರ್, ಶಂಕರ್ ರಾವ್ ಸಜ್ಜನ್, ನಾಗೇಶ್ ಕುಮಾರ್ ಇದ್ದರು.