ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಟ್ಕಾ ತರಲಿಲ್ಲ ಎಂದು ವ್ಯಕ್ತಿಯೊಬ್ಬ ಏಳು ವರ್ಷದ ಪುಟಾಣಿಯನ್ನು ಕೊಲೆ ಮಾಡಿದ್ದಾನೆ. ಏ.20 ರಂದು ಕೊಲೆ ನಡೆದಿದ್ದು, ಬರೋಬ್ಬರಿ 50 ದಿನಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಪ್ಪಳದ ಕಿನ್ನಾಳ ಗ್ರಾಮದ ಅನುಶ್ರೀ (7) ಕೊಲೆಯಾದ ಮಗು. ಅದೇ ಗ್ರಾಮದ ನಿವಾಸಿ ಸಿದ್ದಲಿಂಗಯ್ಯ (51) ಕೊಲೆ ಮಾಡಿದ ಆರೋಪಿ. ಈತನು ವೃತ್ತಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. ಕೊಲೆಯಾದ ಮಗುವಿನ ತಂದೆ ರಾಘವೇಂದ್ರ ಮಡಿವಾಳರ್ ಅವರಿಗೆ ಆರೋಪಿ ಪರಿಚಯವಿದ್ದ. ಮಗು ಹತ್ಯೆಯಾದ ಮೇಲೆ ಮಗಳು ಕಾಣೆಯಾಗಿದ್ದಾಳೆಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ತಂದೆ ರಾಘವೇಂದ್ರ ದೂರು ನೀಡಿದ್ದರು. ಅತ್ಯಂತ ಸೂಕ್ಷ್ಮ ಹಾಗೂ ಸವಾಲ್ ಆಗಿದ್ದ ಈ ಕೊಲೆ ಪ್ರಕರಣ ನಿಧಿ ಆಸೆಗೆ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು.
ಗುಟ್ಕಾ ತಂದು ಕೊಡಲಿಲ್ಲವೆಂದು ಆರೋಪಿ ಸಿದ್ದಲಿಂಗಯ್ಯ ಕೋಲಿನಿಂದ ಜೋರಾಗಿ ಹೆಣ್ಣು ಮಗುವಿಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ ಹತ್ಯೆ ಯಾರಿಗೂ ಗೊತ್ತಾಗಬಾರದು ಎಂದು ಮೂಟೆಯಲ್ಲಿ ಮೃತದೇಹವನ್ನು ಕಟ್ಟಿ ಬಿಸಾಡಿದ್ದ. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಕೊನೆಗೂ 50 ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.