ಹೊಸದಿಗಂತ ನಾಗಮಂಗಲ :
ಪಟ್ಟಣದ ಹೊರವಲಯ ಬಳಪದಮಂಟಿಕೊಪ್ಪಲು ಗ್ರಾಮದ ಸಮೀಪ ಮಾಗಡಿ ಜಲಸೂರು ರಾಜ್ಯ ಹೆದ್ದಾರಿ ಬದಿಯ ಬಿದಿರಿನ ಪೊದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಹೆಣ್ಣು ಚಿರತೆಯ ಕಳೆಬರ ಪತ್ತೆಯಾಗಿದೆ.
ಸತ್ತು ಬಿದ್ದಿದ್ದ ಚಿರತೆಯ ಕಳೆಬರವನ್ನು ಕಂಡ ಸ್ಥಳೀಯರು ಭಯಭೀತರಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ಯಾವುದೋ ವಾಹನಕ್ಕೆ ಸಿಲುಕಿ ಗಾಯಗೊಂಡ ನಂತರ ಬಿದಿರಿನ ಪೊದೆಯೊಳಗೆ ಹೋಗಿರುವ ಈ ಚಿರತೆ ಚೇತರಿಸಿಕೊಳ್ಳಲಾರದೆ ಸಾವನ್ನಪ್ಪಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ.
ಚಿರತೆಯ ಕಳೆಬರವನ್ನು ತಾಲೂಕಿನ ಹೊನ್ನಬೆಟ್ಟದ ಹೊಸೂರು ಬಳಿಯಿರುವ ಅರಣ್ಯ ಇಲಾಖೆಯ ಡಿಪೋಗೆ ರವಾನಿಸಿದ ಅಧಿಕಾರಿಗಳು, ನ್ಯಾಯಾಲಯದ ಅನುಮತಿ ಪಡೆದ ಬಳಿಕ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು. ಬಳಿಕ ಇಲಾಖೆಯ ನಿಯಮಾನುಸಾರ ಚಿರತೆಯ ಕಳೆಬರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲಿ ಸುಟ್ಟುಹಾಕಲಾಯಿತು.
ಎಸಿಎಫ್ ಶಿವರಾಮು, ವಲಯ ಅರಣ್ಯಾಧಿಕಾರಿ ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಮಂಜು, ರಂಗಸ್ವಾಮಿ ಸೇರಿದಂತೆ ಇಲಾಖೆಉ ಸಿಬ್ಬಂದಿಗಳು ಇದ್ದರು.